ಸೊರಬ:ತಾಲ್ಲೂಕಿನ ಮೂಡಿ, ಮೂಗೂರು ಏತ ನೀರಾವರಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಾಗಿ ₹ 1 ಸಾವಿರ ಕೋಟಿ ಅನುದಾನ ತರಲಾಗಿದೆ ಎಂದುಶಾಸಕ ಕುಮಾರ್ ಬಂಗಾರಪ್ಪ ಹೇಳಿದರು.
ಬುಧವಾರ ಅನ್ನಪೂರ್ಣ ಸಭಾಂಗಣದಲ್ಲಿ ತಾಲ್ಲೂಕು ಬಿಜೆಪಿ ಘಟಕಕ್ಕೆ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ವರ್ಷದಲ್ಲಿ ರಸ್ತೆ, ಮೂಲ ಸೌಕರ್ಯಗಳಿಗೆ ₹ 1,200 ಕೋಟಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪಕ್ಷದ ಶಿಸ್ತು ಹಾಗೂ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಯೇ ತಾಲ್ಲೂಕು ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ನಿಷ್ಠಾವಂತರಿಗೆ ಪಕ್ಷದ ಜವಾಬ್ದಾರಿ ನೀಡಲಾಗಿದೆ. ಇದುವರೆಗೂ ಮೇಲ್ಮಟ್ಟದಲ್ಲಿ ಲಾಬಿ ನಡೆಸಿ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದ್ದವರಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂದರು.
ಪಕ್ಷದಲ್ಲಿ ಕೆಲವರ ಹಿತಾಸಕ್ತಿಯಿಂದಾಗಿ 8 ತಿಂಗಳಿನಿಂದ ತಾಲ್ಲೂಕು ಘಟಕಕ್ಕೆ ಅಧ್ಯಕ್ಷರ ನೇಮಕವಾಗಿರಲಿಲ್ಲ. ಪಕ್ಷದ ಸಂಘಟನೆ ಹಾಗೂ ಬಲವರ್ಧನೆ ದೃಷ್ಟಿಯಿಂದ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಧ್ಯಕ್ಷರಾಗಿ ಸಿ.ಎನ್. ಕೊಟ್ರೇಶಗೌಡ, ಉಪಾಧ್ಯಕ್ಷರಾಗಿ ವಿನಾಯಕ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ಮಲ್ಲಿಕಾರ್ಜುನ ವೃತ್ತಿಕೊಪ್ಪ, ಶಿವಕುಮಾರ್ ಕಡಸೂರು ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
‘ಈ ಹಿಂದೆ ಆಯ್ಕೆಗೊಂಡಿದ್ದ ಪಕ್ಷದ ಅಧ್ಯಕ್ಷ ಗುರುಪ್ರಸನ್ನಗೌಡ ಸೇರಿ ಹಿರಿಯ ಮುಖಂಡರು ಇದುವರೆಗೂ ಪಕ್ಷ ಸಂಘಟಿಸುವ ಬಗ್ಗೆ ಸಂಪರ್ಕ ಮಾಡಿಲ್ಲ’ ಎಂದು ಅವರು ದೂರಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಡಿ.ಉಮೇಶ್, ಉಪಾಧ್ಯಕ್ಷ ಮಧುರಾಯ ಶೇಟ್, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸಿ.ಎನ್.ಕೊಟ್ರೇಶಗೌಡ, ಭೋಗೇಶ್, ವಕೀಲ ಸೋಮಶೇಖರ್, ಪ್ರೇಮಾ, ನಂದೀಶಗೌಡ, ದೇವೇಂದ್ರಪ್ಪ, ಟಿ.ಆರ್.ಸುರೇಶ್, ರೇಣುಕಮ್ಮಗೌಳಿ, ಮಲ್ಲಿಕಾರ್ಜುನ ವೃತ್ತಿಕೊಪ್ಪ, ಕನಕದಾಸ ಕಲ್ಲಂಬಿ, ಶಿವಕುಮಾರ್ ಕಡಸೂರು, ಕಲ್ಲಂಬಿ ಹಿರಿಯಣ್ಣ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.