ADVERTISEMENT

ಶಿಕ್ಷಕರ ನೇಮಕಾತಿ ಹಗರಣ | ಮಾದೇಗೌಡರಿಗೆ ಮರಳಿ ಹುದ್ದೆ, ಪ್ರಸ್ತಾವ ತಿರಸ್ಕಾರ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 20:25 IST
Last Updated 10 ನವೆಂಬರ್ 2022, 20:25 IST
ಬಿ.ಸಿ.ನಾಗೇಶ್‌
ಬಿ.ಸಿ.ನಾಗೇಶ್‌   

ಬೆಂಗಳೂರು: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಸಿಐಡಿಯಿಂದ ಬಂಧನಕ್ಕೆ ಒಳಗಾಗಿ, ಅಮಾನತುಗೊಂಡಿದ್ದ ಇಬ್ಬರು ಹಿರಿಯ ಅಧಿಕಾರಿಗಳನ್ನು ಮರಳಿ ಕರ್ತವ್ಯಕ್ಕೆ ತೆಗೆದುಕೊಳ್ಳಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವವನ್ನು ಸಚಿವ ಬಿ.ಸಿ.ನಾಗೇಶ್‌ ತಿರಸ್ಕರಿಸಿದ್ದಾರೆ.

2012–13 ಹಾಗೂ 2014–15ನೇ ಸಾಲಿನ ಸಹ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ. ಮಾದೇಗೌಡ, ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ, ಬಿ.ಕೆ.ಎಸ್. ವರ್ಧನ್‌ ಹಾಗೂ 38 ಶಿಕ್ಷಕರನ್ನು ಸಿಐಡಿ ಬಂಧಿಸಿತ್ತು. ಅಧಿಕಾರಿಗಳು ಜಾಮೀನಿನ ಮೇಲೆ ಹೊರಬಂದಿದ್ದರು. ಅಮಾನತುಗೊಂಡಿದ್ದ ಅವರ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ನೇಮಿಸಲಾಗಿತ್ತು.

‘ಅಮಾನತುಗೊಂಡಿರುವ ಅವರನ್ನು ಸೇವಾ ಅನುಭವದ ಆಧಾರದ ಮೇಲೆ ಮರಳಿ ಸೇರ್ಪಡೆ ಮಾಡಿಕೊಳ್ಳಬಹುದು. ಪಠ್ಯಪುಸ್ತಕಗಳ ಟೆಂಡರ್‌ ಸೇರಿದಂತೆ ಹಲವು ವಿಷಯಗಳಲ್ಲಿ ಅವರ ಅನುಭವದ ಅಗತ್ಯವಿದೆ’ ಎಂದು ಆಯುಕ್ತಆರ್. ವಿಶಾಲ್‌ ಅವರ ಮೌಖಿಕ ಸೂಚನೆ ಅನ್ವಯ ಇಲಾಖೆಯ ಸಿಬ್ಬಂದಿ, ಸಚಿವರಿಗೆ ಕಡತವನ್ನು ಮಂಡಿಸಿದ್ದರು.

ADVERTISEMENT

‘ಕಳಂಕಿತ ಅಧಿಕಾರಿಗಳ ವಿಷಯದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ. ಈಗಾಗಲೇ ಅವರ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೋರ್ಟ್‌ ತೀರ್ಪಿಗೂ ಮೊದಲು ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ಸಚಿವ ನಾಗೇಶ್‌ ಅವರು ಪ್ರಸ್ತಾವ ತಿರಸ್ಕಾರಕ್ಕೆ ಕಾರಣ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.