ADVERTISEMENT

ಗೋರಕನಾಥರಿಗೆ ಅಲ್ಲಮಪ್ರಭುಗಳೇ ಗುರು: ದಿಂಗಾಲೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2021, 2:37 IST
Last Updated 21 ಜನವರಿ 2021, 2:37 IST
ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿ ಗ್ರಾಮದ ಅಲ್ಲಮಪ್ರಭುಗಳು ವಾಸ ಇದ್ದ ಸ್ಥಳಕ್ಕೆ ಬುಧವಾರ ಬಾಲೆಹೊಸೂರು ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿದರು
ಶಿರಾಳಕೊಪ್ಪ ಸಮೀಪದ ಬಳ್ಳಿಗಾವಿ ಗ್ರಾಮದ ಅಲ್ಲಮಪ್ರಭುಗಳು ವಾಸ ಇದ್ದ ಸ್ಥಳಕ್ಕೆ ಬುಧವಾರ ಬಾಲೆಹೊಸೂರು ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿದರು   

ಶಿರಾಳಕೊಪ್ಪ:ಉತ್ತರ ಪ್ರದೇಶದ ಗೋರಕನಾಥ ಯೋಗಿಗಳಿಗೆ ಬಳ್ಳಿಗಾವಿ ಗ್ರಾಮದಲ್ಲಿ ಜನ್ಮ ತಾಳಿದ್ದ ಅಲ್ಲಮ ಪ್ರಭು ಗುರುಗಳಾಗಿದ್ದರು ಎನ್ನುವುದು ನಾಡಿಗೆ ಹೆಮ್ಮೆಯ ಸಂಗತಿ‌ ಎಂದು ಬಾಲೆಹೊಸೂರು ಪೀಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಹತ್ತಿರದ ಬಳ್ಳಿಗಾವಿ ಗ್ರಾಮದಲ್ಲಿರುವ ಅಲ್ಲಮ ಪ್ರಭುಗಳ ಪೀಠಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ‘ಅಕ್ಕಮಹಾದೇವಿಯ ಜನ್ಮಸ್ಥಳ ಉಡುಗಣಿ ಹಾಗೂ ಅಲ್ಲಮಪ್ರಭುಗಳ ಜನ್ಮಸ್ಥಳವಾದ ಬಳ್ಳಿಗಾವಿ ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಕಾರ್ಯ ಶ್ಲಾಘನೀಯ’ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ಅಲ್ಲಮಪ್ರಭುಗಳ ಪ್ರಾಚೀನ ಮನೆ ಇರುವ ಪ್ರದೇಶವು ಸಮಗ್ರ ಅಭಿವೃದ್ಧಿಯಾಗಬೇಕಾಗಿದೆ. ಈಗಾಗಲೇ ₹ 50 ಲಕ್ಷ ಬಿಡುಗಡೆಯಾಗಿದ್ದು, ಇನ್ನೂ ₹ 1 ಕೋಟಿ ಅನುದಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ನಂತರ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸಹ್ಯಾದ್ರಿ ಪಾರಂಪರಿಕ ಪ್ರಾಧಿಕಾರದ ಕಾರ್ಯದರ್ಶಿ ಪೂರ್ಣಿಮಾ ಅವರಿಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಾಮಗಾರಿಯ ನೀಲನಕ್ಷೆ ತಯಾರಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಇದಕ್ಕೂ ಮುನ್ನ ಅಕ್ಕಮಹಾದೇವಿ ಜನ್ಮಸ್ಥಳದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸಂಸದರು ಪರಿಶೀಲಿಸಿದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಜತೆ ಸಮಾಲೋಚನೆ ನಡೆಸಿ ಪ್ರತಿಷ್ಠಾನದ ಅಭಿವೃದ್ಧಿಗೆ ಅನುದಾನ ನೀಡುವ ಭರವಸೆ ನೀಡಿದರು.

ಅಲ್ಲಮಪ್ರಭು ಪೀಠದ ಶಿವಲಿಂಗ ಸ್ವಾಮೀಜಿ, ಕೆಎಸ್‌ಡಿಸಿ ನಿರ್ದೇಶಕಿ ನಿವೇದಿತಾ ರಾಜು, ಮುಖ್ಯಮಂತ್ರಿ ವಿಶೇಷ ಅಧಿಕಾರಿ ಸುರೇಶ್, ಎ.ಸಿ. ಚನ್ನವೀರ ಶೆಟ್ರು, ಮಲ್ಲಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.