ADVERTISEMENT

ಶಿವಮೊಗ್ಗದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 7:25 IST
Last Updated 5 ಡಿಸೆಂಬರ್ 2020, 7:25 IST

ಶಿವಮೊಗ್ಗ: ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಶಿವಮೊಗ್ಗ ನಗರದಲ್ಲಿ ನೀರಿಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡು ದಿನದ ಹಿಂದೆ ನಡೆದ ಕೋಮು ಗಲಭೆ ಮತ್ತು ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಯಾವುದೇ ಸಂಘಟನೆಗಳು ಬಂದ್‍ ಮಾಡಲು ಮುಂದೆ ಬಂದಿಲ್ಲ.

ಶಿವಮೊಗ್ಗದಲ್ಲಿ ಪರಿಸ್ಥಿತಿ ಹೇಗಿದೆ?: ಎರಡು ದಿನಗಳ ಹಿಂದೆ ನಡೆದ ಕೋಮು ಗಲಭೆಯಿಂದಾಗಿ ನಗರದಲ್ಲಿ 144 ಸೆಕ್ಷನ್ ‍ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ. ಶನಿವಾರ ಬೆಳಿಗ್ಗೆ 10ರವರೆಗೂ ನಿಷೇಧಾಜ್ಞೆ ಜಾರಿಯಲ್ಲಿತ್ತು.

ನಿಷೇಧಾಜ್ಞೆಯನ್ನು ಇನ್ನೂ ವಿಸ್ತರಣೆ ಮಾಡದಿರುವುದರಿಂದ ಜನರು ಆತಂಕ ಬದಿಗಿಟ್ಟು ಮನೆಯಿಂದ ಹೊರ ಬರುತ್ತಿದ್ದಾರೆ. ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಿಗಿಸಿಕೊಳ್ಳುತ್ತಿದ್ದಾರೆ.

ADVERTISEMENT

ಹಾಲು, ದಿನಸಿ, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿ, ವಾಕಿಂಗ್, ಜಾಗಿಂಗ್‍ಗೆ ಜನರು ರಸ್ತೆಗಿಳಿದಿದ್ದಾರೆ. ಎರಡು ದಿನದಿಂದ ಸ್ಥಗಿತವಾಗಿದ್ದ ಖಾಸಗಿ ಬಸ್ ಸಂಚಾರ ಪುನಾರಂಭವಾಗಿದ್ದು, ದೂರದ ಊರಿಗೆ ತೆರಳಲು ಜನರು ಬಸ್ ನಿಲ್ದಾಣಕ್ಕೆ ಬರುತ್ತಿದ್ದಾರೆ.
ಕೆಎಸ್‍ಆರ್‌ಟಿಸಿ ಬಸ್ ಸಂಚಾರವು ಸಾಮಾನ್ಯ ಸ್ಥಿತಿಗೆ ಬಂದಿದೆ.

ಆಟೋ ಸಂಚಾರವು ಪುನಾರಂಭವಾಗಿದೆ. ಬಸ್ ನಿಲ್ದಾಣ, ಬಿ.ಎಚ್‍.ರಸ್ತೆ ಸೇರಿದಂತೆ ನಗರದಾದ್ಯಂತ ಆಟೋಗಳು ಸಂಚರಿಸುತ್ತಿವೆ. ಶಿವಮೊಗ್ಗ ನಗರದಾದ್ಯಂತ ವಾಹನ ಸಂಚಾರ ಎಂದಿನಂತೆ ಇದೆ. ಅಂಗಡಿಗಳ ಬಾಗಿಲು ತೆಗೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.