ಸಾಗರ: ‘ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಸಹ್ಯಾದ್ರಿ ಮಾರಾಟ ಕೇಂದ್ರದಲ್ಲಿ ದೊರೆಯುವ ಎಲ್ಲ ಉತ್ಪನ್ನಗಳು ವಿಶ್ವವಿದ್ಯಾಲಯದ ರೈತ ತರಬೇತಿ ಕೇಂದ್ರದಲ್ಲಿ ಸಿಗುವ ವ್ಯವಸ್ಥೆ ಮಾಡಬೇಕು’ ಎಂದು ಒತ್ತಾಯಿಸಿ ಇಲ್ಲಿನ ರೈತ ಸಂಘದ ಪ್ರಮುಖರು ಗುರುವಾರ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
‘ತಾಲ್ಲೂಕಿನ ಇರುವಕ್ಕಿ ಗ್ರಾಮದಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ರೈತರಿಗೆ ಹಲವು ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರುತ್ತದೆ. ಆದ್ದರಿಂದ ಶಿವಮೊಗ್ಗದ ಕೇಂದ್ರದಲ್ಲಿ ಲಭ್ಯವಿರುವ ಕೃಷಿಕರಿಗೆ ಬೇಕಾಗುವ ಉತ್ಪನ್ನಗಳು ವಿಶ್ವವಿದ್ಯಾಲಯದ ಆವರಣದಲ್ಲೂ ದೊರಕುವ ವ್ಯವಸ್ಥೆ ಮಾಡಬೇಕು’ ಎಂದು ಕೋರಿದ್ದಾರೆ.
‘ಜಿಲ್ಲೆಯ ಎಲ್ಲೆಡೆ ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗದ ಬಾಧೆ ಕಾಣಿಸಿಕೊಂಡಿದ್ದು, ಅವುಗಳ ಹತೋಟಿಗೆ ಯಾವ ಕ್ರಮ ಕೈಗೊಳ್ಳಬೇಕು, ಅವುಗಳನ್ನು ತಡೆಯಲು ಯಾವ ಸಂಶೋಧನೆ ನಡೆದಿದೆ ಎನ್ನುವ ಮಾಹಿತಿಯನ್ನು ರೈತರಿಗೆ ನಿರಂತರವಾಗಿ ತಲುಪಿಸಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ರೈತ ಸಂಘದ ಪ್ರಮುಖರಾದ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು, ಅರುಣ್ ಕುಮಾರ್ ಕಸವೆ, ಹೊಯ್ಸಳ ಗಣಪತಿಯಪ್ಪ, ಚಂದ್ರಶೇಖರ ಗೂರ್ಲಕೆರೆ, ಕನ್ನಪ್ಪ ಹೊಸಕೊಪ್ಪ, ಗುರುಮೂರ್ತಿ, ದೇವು ಕಾನ್ಲೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.