ತೀರ್ಥಹಳ್ಳಿ: ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಕಳ್ಳನನ್ನು ಸಾರ್ವಜನಿಕರೇ ಹಿಡಿದು ಥಳಿಸಿ ಸೋಮವಾರ ಪೊಲೀಸರಿಗೆ ಒಪ್ಪಿಸಿದರು.
ಕಳವು ಪ್ರಕರಣಗಳು ತಾಲ್ಲೂಕಿನ ಅಲ್ಲಲ್ಲಿ ಹೆಚ್ಚುತ್ತಿರುವುದು ಪೊಲೀಸರಿಗೆ ಆರೋಪಿಗಳ ಬಂಧನ ಸವಾಲಾಗಿ ಪರಿಣಮಿಸಿತ್ತು. ಸೋಮವಾರಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದರು.
ಬೈಕಿನಲ್ಲಿ ಓಡಾಡುತ್ತಿದ್ದ ಆರೋಪಿಗಳ ಮೇಲೆ ಪೊಲೀಸರು ನಿಗಾ ಇರಿಸಿದ್ದರು. ಪಟ್ಟಣದ ಮಾರಿಕಾಂಬಾ ದೇವಸ್ಥಾನದ ಬಳಿಯ ಮಾರ್ಕೆಟ್ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಅನುಮಾನಾಸ್ಪದವಾಗಿ ಸಾಗುತ್ತಿದ್ದ ಬೈಕ್ ಅನ್ನು ಒದ್ದು ನೆಲಕ್ಕುರುಳಿಸಿ, ಆರೋಪಿಯನ್ನು ಹಿಡಿದರು. ಇದರಿಂದ ಎಚ್ಚೆತ್ತ ಬೈಕ್ ಚಲಾಯಿಸುತ್ತಿದ್ದ ಮತ್ತೊಬ್ಬ ಅತಿ ವೇಗವಾಗಿ ಸಾಗಿ, ಪರಾರಿಯಾದ.
ಜಾಗೃತಗೊಂಡ ಪೊಲೀಸರು ಸಾರ್ವಜನಿಕರ ನೆರವಿನೊಂದಿಗೆ ಬೈಕ್ ಹೋಗುವ ಮಾರ್ಗದಲ್ಲಿನ ಕೆಲ ವ್ಯಕ್ತಿಗಳಿಗೆ ಮಾಹಿತಿ ರವಾನಿಸಿದರು. ಪಟ್ಟಣದಿಂದ 9 ಕಿ.ಮೀ. ದೂರದ ಕುಡುಮಲ್ಲಿಗೆಯಲ್ಲಿ ಸಾರ್ವಜನಿಕರು ಆರೋಪಿ ಚಲಿಸುತ್ತಿದ್ದ ಬೈಕನ್ನು ಅಡ್ಡಗಟ್ಟಿ ಕಳ್ಳನನ್ನು ಹಿಡಿದು, ಥಳಿಸಿದರು. ಬಳಿಕ ಪೊಲೀಸರಿಗೆ ಒಪ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.