ADVERTISEMENT

ಆಪ್ಸ್‌ಕೋಸ್ ಇಬ್ಬರು ನಿರ್ದೇಶಕರ ಸ್ಥಾನ ಅನರ್ಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 4:45 IST
Last Updated 3 ಏಪ್ರಿಲ್ 2021, 4:45 IST

ಸಾಗರ: ಇಲ್ಲಿನ ಆಪ್ಸ್‌ಕೋಸ್ ಸಂಸ್ಥೆಯ ಅಧ್ಯಕ್ಷ ಕೆ.ಎನ್. ಸೂರ್ಯನಾರಾಯಣ ಹಾಗೂ ಮಾಜಿ ಅಧ್ಯಕ್ಷ ಬಿ.ಎ. ಇಂದೂಧರ ಅವರನ್ನು ಜಿಲ್ಲೆಯ ಸಹಕಾರ ಇಲಾಖೆಯ ಉಪ ನಿಬಂಧಕರು ನಿರ್ದೇಶಕರ ಸ್ಥಾನದಿಂದ ಅನರ್ಹಗೊಳಿಸಿ ಮಾರ್ಚ್‌ 29ರಂದು ಆದೇಶ ಹೊರಡಿಸಿದ್ದಾರೆ ಎಂದು ಆಪ್ಸ್‌ಕೋಸ್ ನಿರ್ದೇಶಕ ಆರ್.ಎಸ್. ಗಿರಿ ತಿಳಿಸಿದ್ದಾರೆ.

ಆಪ್ಸ್‌ಕೋಸ್ ಸಂಸ್ಥೆಯ ಸಹಕಾರಿ ಕ್ಷೇತ್ರದ ನಿರ್ದೇಶಕರಾದ ಗುರುಪಾದ ಅವರು ಭೀಮನಕೋಣೆಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್ ಪ್ರತಿನಿಧಿಯಾಗಿದ್ದರು. ಅವರು ಭೀಮನಕೋಣೆ ಕೃಷಿ ಬ್ಯಾಂಕಿಗೆ ಈಚೆಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರಿಂದ ಸಹಕಾರ ಕ್ಷೇತ್ರದ ತೆರವಾದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಸಲು ಆಡಳಿತ ಮಂಡಳಿ ಅಗತ್ಯ ಕ್ರಮ ಕೈಗೊಳ್ಳುವಂತೆ ಉಪ ನಿಬಂಧಕರು ಸೂಚಿಸಿದ್ದರು. ಅದನ್ನು ಪಾಲಿಸದೆ ಇರುವ ಕಾರಣ ಉಪ ನಿಬಂಧಕರು ಸ್ವಯಂ ಪ್ರಕರಣ ದಾಖಲಿಸಿಕೊಂಡು ಸಹಕಾರಿ ಕಾಯ್ದೆ ಅನ್ವಯ ಕ್ರಮ ಜರುಗಿಸಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಸಂಸ್ಥೆಯ ಹಿತಾಸಕ್ತಿಗಿಂತ ಗುರುಪಾದ ಅವರ ನಿರ್ದೇಶಕ ಸ್ಥಾನವನ್ನು ಉಳಿಸಲು ಕೆ.ಎಂ. ಸೂರ್ಯನಾರಾಯಣ ಹಾಗೂ ಬಿ.ಎ. ಇಂದೂಧರ ಅವರು ಮುಂದಾದ ಕಾರಣ ನಿರ್ದೇಶಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಆದರೂ ಅವರು ಅನರ್ಹಗೊಳ್ಳಲು ನಾನೇ ಕಾರಣ ಎಂದು ಕೆಲವರು ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.