ತೀರ್ಥಹಳ್ಳಿ: ದೇಶದ ಜ್ಞಾನದ ಹಣತೆ ಹಚ್ಚುವಲ್ಲಿ ಪ್ರಾಥಮಿಕ ಶಾಲೆಯ ಪಾತ್ರ ಪ್ರಧಾನವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಕುಡುಮಲ್ಲಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಶಾಲೆಗಿದೆ. ಊರು ಬಲಿಷ್ಠವಾಗಿದ್ದರೆ ರಾಷ್ಟ್ರ ಶಕ್ತಿಯುತವಾಗಿ ಬೆಳೆಯುತ್ತದೆ ಎಂದರು.
‘ಪಕ್ಷ ರಾಜಕಾರಣ ಬಿಟ್ಟು ಚಿಂತಿಸುವ ಪ್ರೌಢಿಮೆ ವ್ಯಕ್ತಿಗಳಲ್ಲಿ ಬೆಳೆಯಬೇಕು. ಒಳ್ಳೆಯ ಮನಸ್ಸಿನಿಂದ ಚಿಂತಿಸಿದರೆ ಏನು ಬೇಕಾದರು ಸಾಧಿಸಬಹುದು ಎಂದು ಅಬ್ದುಲ್ ಕಲಾಂ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ಅಂತಹವರ ಜೀವನ ಸಂದೇಶಗಳನ್ನು ವಿದ್ಯಾರ್ಥಿಗಳು ಸರಿಯಾಗಿ ಮನನ ಮಾಡಿಕೊಳ್ಳಬೇಕು ಎಂದರು.
ನೂರು ವರ್ಷಗಳ ಹಿಂದೆ ಕುಡುಮಲ್ಲಿಗೆಯ ಸಣ್ಣ ಗ್ರಾಮದಲ್ಲಿ ಶಾಲೆ ಕಟ್ಟಿದ ಮಹನೀಯರ ಶ್ರಮ ಮತ್ತು ದೂರದೃಷ್ಟಿಯ ಕಲ್ಪನೆ ಪೀಳಿಗೆಯ ಭವಿಷ್ಯವನ್ನು ನಿರ್ಮಾಣ ಮಾಡಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು ಊರಿಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ನಿವೃತ್ತ ದೈಹಿಕ ಶಿಕ್ಷಕ ಬಿ.ಕೆ.ಮಂಜಪ್ಪ ರಂಗಮಂದಿರವನ್ನು, ಕುಡುಮಲ್ಲಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಶೆಟ್ಟಿ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಎಚ್.ಎಂ.ಸತೀಶ್, ಗ್ರಾ.ಪಂ. ಉಪಾಧ್ಯಕ್ಷೆ ಮಮತಾ, ಸದಸ್ಯರಾದ ಸಂದೀಪ, ವಿನಂತಿ, ಸುಮಂಗಲ, ಇಂದಿರಾ, ಪದ್ಮ, ಬಿಇಓ ವೈ.ಗಣೇಶ್, ಪ್ರೌಢಶಾಲೆ ಮುಖ್ಯ ಶಿಕ್ಷಕರ ಮಾರುತೇಶ್, ಯಶಸ್ವಿನಿ ಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.