ಶಿವಮೊಗ್ಗ: ರಾಜ್ಯದ ವಿವಿಧೆಡೆಯ ಜನರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಇದರಿಂದ ಜನದಟ್ಟಣೆ ಏರ್ಪಟ್ಟಿದ್ದು, ಲಾಡ್ಜ್ಗಳಲ್ಲಿ ಕೊಠಡಿಗಳ ದರ ದುಪ್ಪಟ್ಟಾಗಿದೆ.
ಸಾಗರ ತಾಲ್ಲೂಕಿನ ತುಮರಿಯ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಕಳೆದ 3 ದಿನಗಳಿಂದ ಹೆಚ್ಚಿನ ಭಕ್ತರು ಬರುತ್ತಿದ್ದಾರೆ. ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ಅಂಬಾರಗೊಡ್ಲು ಲಾಂಚ್ ತಟದಲ್ಲಿ ಜನದಟ್ಟಣೆ ಏರ್ಪಟ್ಟಿತ್ತು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ದೇವಸ್ಥಾನದಲ್ಲಿ ನಿರಂತರವಾಗಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಇಲ್ಲಿನ ಲಾಡ್ಜ್ಗಳಲ್ಲಿ ಕೊಠಡಿ ದರ ದುಪ್ಪಟ್ಟಾಗಿತ್ತು. ಸಾಮಾನ್ಯ ದಿನಗಳಲ್ಲಿ ಕೊಠಡಿಯೊಂದಕ್ಕೆ ₹ 600 ಬೆಲೆ ಇತ್ತು. ಪ್ರವಾಸಿಗರ ಸಂಖ್ಯೆ ಅಧಿಕವಾಗಿದ್ದರಿಂದ ಭಾನುವಾರ ಹಾಗೂ ಸೋಮವಾರ ಕೊಠಡಿಯೊಂದಕ್ಕೆ ₹1,500 ರಿಂದ ₹2,000 ದರ ನಿಗದಿ ಪಡಿಸಲಾಗಿತ್ತು. ಆದ್ದರಿಂದ ಶಾಲಾ ವಿದ್ಯಾರ್ಥಿಗಳು ರಸ್ತೆ ಬದಿ, ಸಾರ್ವಜನಿಕ ಸ್ಥಳಗಳಲ್ಲಿ ವಾಸ್ತವ್ಯ ಹೂಡಿದ್ದ ದೃಶ್ಯ ಕಂಡುಬಂತು.
ಜೋಗ ಜಲಪಾತದ ಬಳಿಯೂ ಪ್ರವಾಸಿಗರ ದಟ್ಟಣೆ ಕಂಡುಬಂತು. ಜಲಪಾತ ವೀಕ್ಷಣೆಗೆ ಶಾಲಾ ಮಕ್ಕಳೇ ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಇಲ್ಲಿ ಒಂದೇ ಸಾರ್ವಜನಿಕ ಶೌಚಾಲಯ ಇರುವುದರಿಂದ ಪ್ರವಾಸಿಗರು ಪರದಾಡುವಂತಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.