ಹೊಸನಗರ: ಮೇ 29ರಂದು ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮುಂದುವರೆಯಲಿದೆ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪಟ್ಟಣದ ಗಾಂಧಿ ಮಂದಿರದಲ್ಲಿ ಬಿಜೆಪಿ ತೊರೆದು ಭಾನುವಾರ ಕಾಂಗ್ರೆಸ್ ಸೇರಿದ ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಕಟ್ಟೆ ಸುರೇಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಮೈತ್ರಿ ಧರ್ಮಪಾಲನೆಯಲ್ಲಿ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ. ಇದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅಧಿಕ ಲಾಭವಾಗಲಿದೆ. ಈಗಾಗಲೇ ಸಾಗರ, ಹೊಸನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಟಿಕೆಟ್ ಹಂಚಿಕೆ ಕಾರ್ಯ ಯಾವುದೇ ಗೊಂದಲ ಇಲ್ಲದೆ ಬಹುತೇಕ ಸಿದ್ಧವಾಗಿದೆ ಎಂದರು.
‘ಕಾಂಗ್ರೆಸ್ಗೆ 6, ಜೆಡಿಎಸ್ಗೆ 5’
‘ಹೊಸನಗರ ಪಟ್ಟಣ ಪಂಚಾಯತಿಯಲ್ಲಿ 11 ಸದಸ್ಯರಲ್ಲಿ ಕಾಂಗ್ರೆಸ್ಗೆ 6 ಹಾಗೂ ಜೆಡಿಎಸ್ 5 ಸ್ಥಾನಗಳನ್ನು ಹಂಚಿಕೊಳ್ಳಲು ಸ್ಥಳೀಯ ಮುಖಂಡರು ಒಪ್ಪಿದ್ದಾರೆ. ಈ ಹಿಂದೆ ನಾನು ಶಾಸಕನಾಗಿದ್ದ ವೇಳೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಸಮಗ್ರ ಅಭಿವೃದ್ದಿ ಮಾಡಲಾಗಿದೆ. ಇವು ಮತಗಳಾಗಿ ಪರಿವರ್ತನೆ ಆಗಲಿವೆ’ ಎಂದು ಆಶಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ, ಪಟ್ಟಣ ಘಟದ ಅಧ್ಯಕ್ಷ ಶ್ರೀನಿವಾಸ ಕಾಮತ್, ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎರಗಿ ಉಮೇಶ್, ಡಿ.ಎಂ. ಸದಾಶಿವ ಶ್ರೇಷ್ಠಿ, ಯುವ ಕಾಂಗ್ರೆಸ್ ಅಧ್ಯಕ್ಷ ಬ್ರಹ್ಮೇಶ್ವರ ಸುಧೀರ್, ಪ್ರಮುಖರಾದ ಸಣ್ಣಕ್ಕಿ ಮಂಜು, ಜಯನಗರ ಗೋಪಿನಾಥ್, ಬಸವರಾಜ, ಕೆ.ಕೆ. ಅಶ್ವಿನಿ ಕುಮಾರ್, ಡೆವಿಡ್ ಶರಾವೋ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.