ಬೆಂಗಳೂರು: ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು ನಡುವೆ ಹೊಸ ರೈಲು ಮಾರ್ಗದ ಕಾಮಗಾರಿ ಆರಂಭಿಸುವುದು ಹಾಗೂ ಶಿವಮೊಗ್ಗ– ಯಶವಂತಪುರ ಇಂಟರ್ಸಿಟಿ ರೈಲು ಸಂಚಾರವನ್ನು ಚೆನ್ನೈ ವರೆಗೆ ವಿಸ್ತರಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನೇತೃತ್ವದಲ್ಲಿ ಸೋಮವಾರನಡೆದ ಸಭೆಯಲ್ಲಿ ರಾಜ್ಯದ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.
ಶಿವಮೊಗ್ಗ– ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ತಾತ್ವಿಕವಾಗಿಒಪ್ಪಿಗೆ ನೀಡಲಾಗಿದೆ. ಶಿವಮೊಗ್ಗ– ಯಶವಂತಪುರ ನಡುವೆ ಸಂಚರಿಸುವ ಶತಾಬ್ಧಿರೈಲು ಪ್ರಯಾಣ ಸಮಯ ಬದಲಾವಣೆ ಕುರಿತು ಚರ್ಚಿಸಲಾಯಿತು. ಬೀರೂರು– ಶಿವಮೊಗ್ಗ ರೈಲು ಮಾರ್ಗದ ಜೋಡಿ ಹಳಿ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲು ಸೂಚಿಸಲಾಯಿತು.
ಸಬ್ ಅರ್ಬನ್:ಬೆಂಗಳೂರು ನಗರದ ಸಬ್ ಅರ್ಬನ್ ರೈಲು ಯೋಜನೆ, ಮೆಟ್ರೋ ಕಾಮಗಾರಿ ಸಂಬಂಧ ಅಧಿಕಾರಿಗಳ ಜತೆ ಚರ್ಚಿಸಲಾಯಿತು.
ತ್ವರಿತವಾಗಿ ಪೂರ್ಣ: ಬಾಗಲಕೋಟೆ– ಕುಡಚಿ ಸೇರಿದಂತೆ ಇತರೆ ಜೋಡಿ ರೈಲು ಮಾರ್ಗದ ಯೋಜನೆಗಳು ಬಾಕಿ ಇದ್ದು, ಶೀಘ್ರ ಪೂರ್ಣಗೊಳಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಸಭೆಯ ನಂತರ ಸುರೇಶ್ ಅಂಗಡಿ ತಿಳಿಸಿದರು.
ಬೆಂಗಳೂರು ನಗರದಲ್ಲಿ ರೈಲ್ವೆ ಮೇಲು ಸೇತುವೆ ಹಾಗೂ ಕೆಳಸೇತುವೆಗಳಿಗೆ ಅಗತ್ಯ ಭೂಮಿ ಸ್ವಾಧೀನಪಡಿಸಿಕೊಳ್ಳದೆ ಕಾಮಗಾರಿ ಬಾಕಿ ಉಳಿದಿದ್ದು, ಲಭ್ಯವಿರುವ ಜಾಗದಲ್ಲೇ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.