ಶಿವಮೊಗ್ಗ: ಕೋವಿಡ್ನಿಂದ ಬಳಲುತ್ತಿರುವ ತಬ್ಲಿಗ್ ಸದಸ್ಯರನ್ನು ಮದರಸಾ ಅಥವಾ ಅಲ್ಪಸಂಖ್ಯಾತರ ಶಾಲೆಗಳಲ್ಲೇ ಕ್ವಾರಂಟೈನ್ ಮಾಡಿ, ಚಿಕಿತ್ಸೆ ನೀಡಬೇಕು. ಅಲ್ಲಿ ಅವರು ಪ್ರಾರ್ಥನೆ ಸಲ್ಲಿಸಲು, ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು.
ದೇಶದ ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ, ರಾಜಕೀಯ ನಾಯಕರು ಚಿಕಿತ್ಸೆಗೆ ಸಹಕಾರ ನೀಡದ ತಬ್ಲಿಗ್ ಸದಸ್ಯರ ವರ್ತನೆ ಖಂಡಿಸಬೇಕು. ಅವರ ನಡೆ ನಿಯಂತ್ರಿಸಬೇಕು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ದೇಶದಲ್ಲಿ ಕೊರೊನಾ ಸೋಂಕು ಹರಡುವಲ್ಲಿ ಕಾರಣರಾಗಿರುವ ತಬ್ಲಿಗ್ ಸದಸ್ಯರ ಮೇಲೆ ದಯೆ ತೋರಿಸುವ ಆವಶ್ಯಕತೆ ಇಲ್ಲ. ಅಲ್ಪಸಂಖ್ಯಾತ ಧಾರ್ಮಿಕ ಮತ್ತು ರಾಜಕೀಯ ನಾಯಕರು ಅವರ ವರ್ತನೆಯನ್ನು ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂಬ ಶಂಕೆ ಇದೆ. ಇದರಿಂದ ಎಲ್ಲಾ ಅಲ್ಪಸಂಖ್ಯಾತರನ್ನೂ ಅನುಮಾನದಿಂದ ನೋಡುವಂತಾಗಿದೆ. ತಬ್ಲಿಗ್ ಸದಸ್ಯರಿಗೆ ವಿದೇಶಿ ಭಯೋತ್ಪಾದಕರ ನಂಟಿದೆ ಎಂಬ ಸಂಶಯಕ್ಕೆ ಅವರ ವರ್ತನೆಗಳೇ ಕಾರಣ ಎಂದು ಆರೋಪಿಸಿದರು.
ಶಿವಮೊಗ್ಗದಲ್ಲಿ ಪತ್ತೆಯಾದ ಕೊರೊನಾ ಸೋಂಕಿತರಲ್ಲಿ ಇಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಅವರನ್ನು ಹಿಡಿಯಲಾಗಿದೆ. ಹಸಿರು ವಲಯವಾಗಿದ್ದ ಶಿವಮೊಗ್ಗ ಜಿಲ್ಲೆ ನೆಮ್ಮದಿಗೆ ಧಕ್ಕೆಯಾಗಿದೆ. ಜನರು ಆತಂಕ ಪಡುತ್ತಿದ್ದಾರೆ. ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಪಕ್ಕದ ತಾಲ್ಲೂಕುಗಳಾದ ಹೊನ್ನಾಳಿ, ಚನ್ನಗಿರಿಯಲ್ಲೂ ತಬ್ಲಿಗಿಗಳ ಪ್ರವೇಶ ಆತಂಕ ಹೆಚ್ಚಿಸಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಬಿಜೆಪಿ ಮುಖಂಡ ಎಚ್.ಸಿ.ಬಸವರಾಜಪ್ಪ, ಚಂದ್ರಶೇಖರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.