
ಶಿಕಾರಿಪುರದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿನ ಮರಗಳನ್ನು ಕಡಿದಿರುವುದು
ಶಿಕಾರಿಪುರ: ಗಿಡ ನೆಟ್ಟು ಬೆಳೆಸಬೇಕು ಎಂದು ತಿಳಿಹೇಳುವ ಕಾಲೇಜಿನ ಆಡಳಿತವೇ ಜಂಗಲ್ ಕಟಿಂಗ್ ಹೆಸರಿನಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮರಗಳ ಮಾರಾಣ ಹೋಮ ನಡೆಸಿದ್ದು, ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಗಿದೆ.
‘ಕಾಲೇಜು ಆವರಣಕ್ಕೆ ತೆರಳಿದರೆ ಸಾಕು ನೆರಳು ನೀಡುತ್ತಿದ್ದ ಮರಗಳಿನ್ನು ನೆನಪು ಮಾತ್ರ. ವಿದ್ಯುತ್ ಲೈನ್ಗೆ ತಾಗುತ್ತವೆ ಎನ್ನುವ ಕಾರಣಕ್ಕೆ ರೆಂಬೆ, ಕೊಂಬೆ ಕಡಿಯಬೇಕಿತ್ತು. ಆದರೆ ಅಂದಾಜು 8 ಮರಗಳನ್ನೇ ಬುಡಸಹಿತ ಕಡಿದು ಹಾಕಲಾಗಿದೆ. ಯಾವುದೇ ತೊಂದರೆ ಕೊಡದೆ ಇದ್ದ ದೊಡ್ಡ ಮರವೊಂದರ ದಪ್ಪ ಕೊಂಬೆಯನ್ನೇ ಕಡಿಯಲಾಗಿದೆ’ ಎಂದು ಹಿರಿಯ ವಿದ್ಯಾರ್ಥಿ ಸಂಘಟನೆಯ ಮಂಜುನಾಥ್ ಕಳೆಗುಡ್ಡಿ ಅಸಮಾಧಾನ ಹೊರಹಾಕಿದರು.
‘ವಿದ್ಯುತ್ ತಂತಿಗೆ ತಾಗುತ್ತವೆ ಎಂದರೆ ಹರೆ ಕಡಿದಿದ್ದರೂ ಸಾಕಿತ್ತು. ಯಾರೋ ಸಸಿ ನೆಟ್ಟು ನೀರುಣಿಸಿ ಪೋಷಿಸಿದ ಮರ ಕಡಿದಿರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಇದೊಂದು ಕ್ಷಮಿಸಲಾಗದ ಅಪರಾಧ. ಘಟನೆಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಪರಿಸರ ಸಂರಕ್ಷಣೆ ಮಾಡಬೇಕು ಎನ್ನುವ ಕಳಕಳಿ ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಮೂಡಿಸಬೇಕಿರುವ ಕಾಲೇಜು ಆಡಳಿತ ಮರ ಕಡಿಯುವ ಕೆಲಸ ಮಾಡಿರುವುದು ಸರಿಯಲ್ಲ. ಜಂಗಲ್ ಕಟ್ಟಿಂಗ್ ಮಾಡುವುದಕ್ಕೆ ಮಾತ್ರ ಶಾಲಾಭಿವೃದ್ಧಿ ಸಮಿತಿ ಅನುಮತಿ ನೀಡಿತ್ತು. ಆದರೆ ಮರಗಳ ಬುಡಕ್ಕೆ ಕೊಡಲಿ ಇಡುವ ಕೆಲಸ ಮಾಡಿರುವುದು ಸರಿಯಲ್ಲ. ವಿದ್ಯಾರ್ಥಿಗಳು ನೆಟ್ಟು ಬೆಳೆಸಿದ ಮರಗಳಿಗೆ ಕೊಡಲಿ ಹಾಕುವ ಘಟನೆ ಕುರಿತು ತನಿಖೆ ನಡೆಯಬೇಕು’ ಎಂದು ಹಿರಿಯ ವಿದ್ಯಾರ್ಥಿಗಳ ಪರವಾಗಿ ಜಿ.ಕೆ.ಆಕಾಶ್ ಆಗ್ರಹಿಸಿದ್ದಾರೆ.
ಮರದ ರೆಂಬೆ ಕಟ್ಟಡ ಮೇಲ್ಭಾಗಕ್ಕೆ ಬಂದು ಎಲೆಗಳೆಲ್ಲವೂ ಉದುರಿ ಕಟ್ಟಡ ಸೋರುತ್ತಿತ್ತು. ಅಲ್ಲದೇ ಒಣಗಿದ ಮರ ವಿದ್ಯಾರ್ಥಿಗಳ ಮೇಲೆ ಬೀಳುತ್ತವೆ ಎನ್ನುವ ಕಾರಣಕ್ಕೆ ಮರ ಕಡಿಯಲಾಗಿದೆ. ಶಾಲಾಭಿವೃದ್ಧಿ ಸಮಿತಿ ಶಾಸಕರ ಒಪ್ಪಿಗೆ ಪಡೆದು ಮರ ಕಡಿಸಲಾಗಿದೆಬಿ.ಜಿ. ಚನ್ನಪ್ಪ, ಪ್ರಾಂಶುಪಾಲ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.