ADVERTISEMENT

ಗ್ಯಾಂಗ್‌ವಾರ್‌ನಲ್ಲಿ ಇಬ್ಬರ ಹತ್ಯೆ: ಪೊಲೀಸರ ವೈಫಲ್ಯ- ಶಾಸಕ ಚನ್ನಬಸಪ್ಪ ಆರೋಪ

ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪ: ಪಿಎಸ್‌ಐ ವರ್ಗಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:24 IST
Last Updated 9 ಮೇ 2024, 15:24 IST
ಎಸ್.ಎನ್.ಚನ್ನಬಸಪ್ಪ
ಎಸ್.ಎನ್.ಚನ್ನಬಸಪ್ಪ   

ಶಿವಮೊಗ್ಗ: ಶಿವಮೊಗ್ಗದಲ್ಲಿ ಬುಧವಾರ ಹಾಡಹಗಲೇ ನಡೆದ ಗ್ಯಾಂಗ್‌ವಾರ್‌ನಲ್ಲಿ ಇಬ್ಬರು ಯುವಕರು ಹತ್ಯೆಯಾಗಿದ್ದಾರೆ. ಇದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆರೋಪಿಸಿದರು.

‘ಜಿಲ್ಲೆಯಲ್ಲಿ ಶಾಂತಿ–ಸುವ್ಯವಸ್ಥೆ ಚೆನ್ನಾಗಿದೆ ಎಂದು ಹೇಳುತ್ತಾರೆ. ಆದರೆ, ಕೊಲೆಗಳು ನಡೆಯುತ್ತಲೇ ಇವೆ. ಇದರ ಹಿಂದೆ ರೌಡಿಗಳ ಪಾತ್ರವಿದೆ. ಪೊಲೀಸ್ ಇಲಾಖೆಗೆ ಸಮಗ್ರ ಮಾಹಿತಿ ಇತ್ತು. ಆದರೂ ಅವರು ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ. ಒಂದಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಕೊಲೆಗಳ ತಪ್ಪಿಸಬಹುದಿತ್ತು’ ಎಂದರು.

‘ಪ್ರಕರಣದಲ್ಲಿ ಕೋಟೆ ಪೊಲೀಸ್‌ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ. ಈ ಕೊಲೆ ಮಾಡಿದವರು ಹೊಳಲೂರಿನಲ್ಲಿ ಉಳಿದುಕೊಂಡಿದ್ದರು ಎಂಬ ಮಾಹಿತಿ ಇದೆ. ಜಿಲ್ಲೆಯಲ್ಲಿ ಗಾಂಜಾ, ಅಫೀಮು ಕಳ್ಳಸಾಗಾಣಿಕೆ ಇದೆ. ಅದರ ಪರಿಣಾಮವೇ ಈ ರೀತಿಯ ಘಟನೆಗಳಿಗೆ ಕಾರಣ’ ಎಂದು ದೂರಿದರು.

ADVERTISEMENT

ಇಂತಹ ಘಟನೆ ನಡೆದಾಗ ಎಸ್ಪಿ ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಶಿವಮೊಗ್ಗ ನಗರದಲ್ಲಿ ಶಾಂತಿ–ಸುವ್ಯವಸ್ಥೆ ಇಲ್ಲವಾಗಿದೆ.  ಘಟನೆಗೆ ಸಂಬಂಧಿಸಿದಂತೆ ಕೋಟೆ ಠಾಣೆ ಸಬ್‌ಇನ್‌ಸ್ಪೆಕ್ಟರ್ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
 
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ನಾಗರಾಜ್, ಮೋಹನ್‌ರೆಡ್ಡಿ, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.