ADVERTISEMENT

ಹೊಸನಗರ: ನಿರ್ಮಾತೃವಿನ ಹೆಸರಿನಲ್ಲೊಂದು ದೇವಾಲಯ

ಉಮಾ ಮಹೇಶ್ವರ: ಶರಾವತಿ ನದಿ ತಟದಲ್ಲಿರುವ ಶಿವಾಲಯ

ರವಿ ನಾಗರಕೊಡಿಗೆ
Published 4 ಫೆಬ್ರುವರಿ 2024, 7:04 IST
Last Updated 4 ಫೆಬ್ರುವರಿ 2024, 7:04 IST
<div class="paragraphs"><p>ಹೊಸನಗರ ತಾಲ್ಲೂಕು ಸಾಲಗೇರಿ ಗ್ರಾಮದಲ್ಲಿರುವ ಉಮಾಪತಿ ದೇವಸ್ಥಾನ</p></div>

ಹೊಸನಗರ ತಾಲ್ಲೂಕು ಸಾಲಗೇರಿ ಗ್ರಾಮದಲ್ಲಿರುವ ಉಮಾಪತಿ ದೇವಸ್ಥಾನ

   

ಹೊಸನಗರ: ದೇವಸ್ಥಾನವನ್ನು ಕಟ್ಟಿಸಿದ ಭಕ್ತನ ಹೆಸರು, ಆತನ ಶ್ರಮ ಕಾಲಾನಂತರ ನೆನಪಿನಿಂದ ಮಾಸುವುದೇ ಹೆಚ್ಚು. ಆತನ ಹೆಸರು ಹೇಳುವವರು, ಕೇಳುವವರು ಇರುವುದಿಲ್ಲ. ಆದರೆ, ಹೊಸನಗರ ತಾಲ್ಲೂಕಿನಲ್ಲಿರುವ ದೇವಾಲಯವೊಂದು ಗುಡಿ ಕಟ್ಟಿದ ನಿರ್ಮಾತೃವಿನ ಹೆಸರನ್ನೇ ತನ್ನದಾಗಿಸಿಕೊಂಡು ಇಂದಿಗೂ ಜನಜನಿತವಾಗಿದೆ.

ಹೊಸನಗರ ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಗೇರಿ ಗ್ರಾಮದಲ್ಲಿರುವ ಉಮಾಮಹೇಶ್ವರ ದೇವಾಸ್ಥಾನ ತನ್ನನ್ನು ನಿರ್ಮಿಸಿದ ಪರಮ ಭಕ್ತನ ಹೆಸರನ್ನು ತನ್ನಲ್ಲೇ ಇರಿಸಿಕೊಂಡು ಚಿರಸ್ಥಾಯಿಗೊಳಿಸಿದೆ.

ADVERTISEMENT

ತಾಲ್ಲೂಕಿನ ಜೀವನದಿ ಶರಾವತಿಯ ಬಲ ದಂಡೆಯ ನಿಸರ್ಗ ನಿರ್ಮಿತ ನಿರ್ಮಲ ಪರಿಸರದಲ್ಲಿರುವ ಈ ದೇವಸ್ಥಾನ ಪ್ರಮುಖ ಕಾರಣಿಕ ಕ್ಷೇತ್ರವಾಗಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.

ಭಕ್ತಿ ಮೆರೆದ ವ್ಯಾಪಾರಿ: ವೈಷ್ಣವ ಪಂಥದ ಭಕ್ತ ಉಪ್ಪಿನ ವ್ಯಾಪಾರಿಯೊಬ್ಬ ಶಿವನ ದೇವಸ್ಥಾನ ಕಟ್ಟಿಸಿದ ದಂತಕತೆ ಈ ದೇವಾಲಯದ ಹಿರಿಮೆ ಆಗಿದೆ.

ಕೆಳದಿ ಅರಸರು ಬಿದನೂರು ನಗರ ಆಳ್ವಿಕೆ ನಡೆಸುತ್ತಿದ್ದ ಶಿವಪ್ಪ ನಾಯಕನ ಕಾಲವದು. ಈ ಸಂಸ್ಥಾನದಲ್ಲಿ ದೂರದ ಊರಿನಿಂದ ಬಂದ ಉಮಾಪತಿ ಎಂಬ ಉಪ್ಪಿನ ವ್ಯಾಪಾರಿ ಬಾರೀ ವಹಿವಾಟು ನಡೆಸುತ್ತಿದ್ದ. ಒಂದು ದಿನ ವ್ಯಾಪಾರಿ ನಗರಕ್ಕೆ ವ್ಯಾಪಾರಕ್ಕೆಂದು ಹೋಗಲು ಸಂಸ್ಥಾನದ ಅನುಮತಿಗಾಗಿ ಸಾಲಗೇರಿ ಬಳಿ ಕಾದು ಮಲಗಿದ್ದ. (ಅಂದು ಬಿದನೂರು ನಗರಕ್ಕೆ ಹೋಗಲು ಸಾಲಗೇರಿಯಲ್ಲಿ ಪರವಾನಗಿ ಚೀಟಿ ನೀಡುವ ಕೇಂದ್ರ ಅಸ್ಥಿತ್ವದಲ್ಲಿತ್ತು).

ಉಮಾಪತಿ ಮಲಗಿದ್ದಾಗ ರಾತ್ರಿ ಕನಸಿನಲ್ಲಿ ಬಂದ ಶಿವ ತನಗೊಂದು ಗುಡಿ ಕಟ್ಟಲು ಕೇಳಿಕೊಂಡ. ತಕ್ಷಣವೇ ಎಚ್ಚೆತ್ತುಕೊಂಡ ಉಮಾಪತಿ ಕ್ಷಣಮಾತ್ರದಲ್ಲಿ ಶಿವನ ಆಸೆ ಪೂರೈಸಲು ಕಟಿಬದ್ಧನಾದ. ವ್ಯಾಪಾರಿಯು ನೇರವಾಗಿ ಅರಸ ಶಿವಪ್ಪ ನಾಯಕನ ಬಳಿ ಹೋಗಿ ಮನದಾಸೆ ಬಿನ್ನಹ ಮಾಡಿಕೊಂಡ. ಅರಸ ಶಿವಪ್ಪನಾಯಕನ ಸಮ್ಮತಿ, ಸಹಕಾರ ಪಡೆದು ದೇವಾಲಯ ಕಟ್ಟಿಸಿದ ಎಂಬುದು ಐತಿಹ್ಯ.

ಅದರಂತೆ ಸಾಲಗೇರಿಯಲ್ಲಿ ಕಟ್ಟಿಸಿದ ಈ ದೇವಾಸ್ಥಾನ ಉಮಾಮಹೇಶ್ವರ, ಉಮಾಪತಿ ಎಂದೇ ಹೆಸರಾಯಿತು.

ಶೈವ ಪಂಥದ ಬಿದನೂರು ನಾಯಕರ ಆಡಳಿತ ಕಾಲದಲ್ಲಿ ನಗರ ಬಿದನೂರು ಭಾಗದಲ್ಲಿ ಶೈವ ಪಂಥದವರೇ ಹೆಚ್ಚು ವಾಸವಾಗಿದ್ದರು. ಅವರ ಆಚರಣೆಗಳೇ ನಡೆಯುತ್ತಿದ್ದವು. ವೈಷ್ಣವ ಪಂಥದ ವ್ಯಾಪಾರಿ ಶಿವಾಲಯ ಕಟ್ಟಲು ಮುಂದಾದಾಗ ಶೈವರ ಪ್ರಬಲ ವಿರೋಧ ವ್ಯಕ್ತವಾದರೂ ಅದನ್ನು ಲೆಕ್ಕಿಸದ ವ್ಯಾಪಾರಿ ವೈಷ್ಣವ ಶೈಲಿಯಲ್ಲೇ ದೇವಾಸ್ಥಾನ ನಿರ್ಮಿಸಿದ. ಅಲ್ಲದೆ, ವೈಷ್ಣವ ಪಂಥದ ಪದ್ಧತಿಯಂತೆ ಪೂಜೆ ನಡೆಯಿತು. ನಂತರ ಶೈವ– ವೈಷ್ಣವ ಎರಡೂ ಪಂಥಗಳ ಮಾದರಿಯಲ್ಲಿ  ಪೂಜೆಯೂ ನಡೆದು ಸರ್ವ ಜನರ ಸಾಮರಸ್ಯದ ತಾಣವಾಯಿತು ಎನ್ನುತ್ತದೆ ಸ್ಥಳ ಪುರಾಣ.

ವಿಶಿಷ್ಟ ಕೆತ್ತನೆ ಮೂರ್ತಿಗಳು

ದಶಾವತಾರಗಳ ಚಿತ್ತಾರ: ದೇವಸ್ಥಾನದ ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗ ಪ್ರತಿಷ್ಠಾಪಿಸಲಾಗಿದ್ದು, ಸುತ್ತಲಿನ ಗೋಡೆಯಲ್ಲಿ ವಿಷ್ಣುವಿನ ದಶಾವತಾರಗಳ ವಿಶೇಷ ಚಿತ್ತಾರದ ಕೆತ್ತನೆ ಮನಸೆಳೆಯುತ್ತದೆ.

ಶಿಲ್ಪ ಸಾಲುಗಳ ಮಧ್ಯದಲ್ಲಿ ಒಂದೇ ಕಲ್ಲಿನಲ್ಲಿ (ಏಕಶಿಲೆ) ಕೆತ್ತಲಾದ ಗಂಡು ಹೆಣ್ಣು ರೂಪದ ಪರಿಕಲ್ಪನೆಯು ಶಿವ ಮತ್ತು ಮೋಹಿನಿ ಪ್ರತಿರೂಪ ಎಂದು ಬಿಂಬಿಸಲಾಗಿದೆ. ಅಲ್ಲದೇ ಶಿವ ಮತ್ತು ವಿಷ್ಣು (ಮೋಹಿನಿ) ಒಂದೇ ಎಂದು ಹರಿಹರ ತತ್ವದಲ್ಲಿ ಪ್ರತಿಪಾದಿಸಲಾಗಿದೆ.

ವಿಶಿಷ್ಟ ಕೆತ್ತನೆ ಮೂರ್ತಿಗಳು
ಪುನಃ ನಿರ್ಮಾಣ
ಬಿದನೂರು ನಾಯಕರ ಸಂಸ್ಥಾನದ ಮೇಲೆ ದಂಡೆತ್ತಿ ಬಂದ ಟಿಪ್ಪು ಸುಲ್ತಾನನ ದಾಳಿಗೆ ನಗರ ದ್ವಂಸವಾದ ಪರಿಣಾಮ ಉತ್ತುಂಗ ಸ್ಥಿತಿಯಲ್ಲಿದ್ದ ಭಕ್ತರ ಶ್ರದ್ಧಾಕೇಂದ್ರ ಉಮಾಪತಿ ದೇವಾಲಯವು ಹಂತಕರ ಸಂಚಿಗೆ ಹಾಳಾಯಿತು. ನಿತ್ಯ ಪೂಜೆಗೆ ಒಳಪಡುತ್ತಿದ್ದ ವಿಶಿಷ್ಟ ಪಚ್ಚೆಲಿಂಗ ಮಾಯವಾಯಿತು. ದೇಗುಲ ಹಂತ ಹಂತವಾಗಿ ಹಾಳುಬಿದ್ದು ಕೊಂಪೆಯಾಯಿತು. ನಂತರ 1996ರಲ್ಲಿ ಗ್ರಾಮಸ್ಥರೆಲ್ಲ ಸೇರಿ ಲಿಂಗವನ್ನು ಪುನರ್ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಮಾಡುತ್ತಿದ್ದಾರೆ. ಶಿವರಾತ್ರಿ ದಿನ ಊರವರೆಲ್ಲ ಸಂಭ್ರಮದಲ್ಲಿ ಪಾಲ್ಗೊಂಡು ಹಬ್ಬ ಆಚರಿಸುವುದು ಇಲ್ಲಿನ ವಾಡಿಕೆಯಾಗಿದೆ. ಹೊಸನಗರದಿಂದ ಉಮಾಪತಿ ದೇವಾಸ್ಥಾನ 5 ಕೀ.ಮೀ ದೂರವಿದ್ದು ಹೋಗಿ ಬರಲು ವಾಹನಗಳ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.