ತೀರ್ಥಹಳ್ಳಿ: ಬೆಂಗಳೂರಿನ ರಂಗ ಸಂಪದ ತಂಡದಿಂದ ಚಲನಚಿತ್ರ ನಟಿ, ರಂಗಭೂಮಿ ಕಲಾವಿದೆ ಉಮಾಶ್ರೀ ಅಭಿನಯದ ‘ಶರ್ಮಿಷ್ಠೆ’ ಏಕವ್ಯಕ್ತಿ ನಾಟಕ ಪ್ರದರ್ಶನ ಜುಲೈ 13ರಂದು ಸಂಜೆ 6.30ಕ್ಕೆ ಇಲ್ಲಿನ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ನಟಮಿತ್ರರು ತಂಡದ ಅಧ್ಯಕ್ಷ ಸಂದೇಶ ಜವಳಿ ಹೇಳಿದರು.
ರಥಬೀದಿಯ ರಾಮಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪುರಾಣದ ಯಾಯಾತಿ ಹೆಂಡತಿ ಶರ್ಮಿಷ್ಠೆಯನ್ನು ಕೇಂದ್ರೀಕರಿಸಿ ನಾಟಕ ರಚಿಸಲಾಗಿದೆ ಎಂದರು.
ಅತ್ಯಂತ ಸಂಕೀರ್ಣ ವ್ಯಕ್ತಿತ್ವವುಳ್ಳ, ವರ್ತಮಾನದ ನೆಲೆಗಟ್ಟಿನಲ್ಲಿ ನಿಂತು ಪ್ರಶ್ನಿಸುತ್ತಾ ನಮ್ಮನ್ನು ಆವರಿಸಿಕೊಳ್ಳುವ ಶರ್ಮಿಷ್ಠೆಯ ಪಾತ್ರ ಎಂದಿಗೂ ಪ್ರಸ್ತುತ. ಯಾಯಾತಿ ಮತ್ತು ಅವನ ಮಗ ಪುರು ಹಾಗೂ ಶರ್ಮಿಷ್ಠೆಯ ಮಧ್ಯೆ ಏರ್ಪಡುವ ತ್ರಿಕೋನ ಸಂಘರ್ಷ, ಹಲವು ಆಯಾಮಗಳನ್ನು ಅನಾವರಣಗೊಳಿಸುತ್ತದೆ.
ನಾಟಕವನ್ನು ಬೇಲೂರು ರಘುನಂದನ್ ರಚಿಸಿದ್ದಾರೆ. ರಂಗನಿರ್ದೇಶಕ ಚಿದಂಬರರಾವ್ ಜಂಬೆ ನಿರ್ದೇಶಿಸಿದ್ದಾರೆ. ಅನೂಷ್ ಶೆಟ್ಟಿ ಸಂಗೀತ, ವಸ್ತ್ರವಿನ್ಯಾಸ ರಂಗ ಸಜ್ಜಿಕೆ ಮತ್ತು ರಂಗಪರಿಕರಗಳ ನಿರ್ವಹಣೆ ಪ್ರಮೋದ್ ಶಿಗ್ಗಾಂವ್ ನಿರ್ವಹಿಸುತ್ತಿದ್ದಾರೆ.
ಆಶಾ ಡೇನಿಯೆಲ್, ಸತೀಶ್ ಹೊರಣಿ, ಚೇತನ್ ಜಿ., ಶಿವಾಜಿ, ಹರಿ ವಿನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.