ಶಿವಮೊಗ್ಗ: ಸಂವಿಧಾನವನ್ನು ಅರ್ಥಮಾಡಿಕೊಳ್ಳುವ ಮೊದಲು ವಿವಿಧತೆಯಲ್ಲಿ ಏಕತೆ ಇರುವ ಭಾರತ ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ವಕೀಲ ಕೆ.ಪಿ. ಶ್ರೀಪಾಲ್ ಹೇಳಿದರು.
ನಗರದ ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಶನಿವಾರ ಮಾನಸ ಟ್ರಸ್ಟ್ ಮತ್ತು ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಐಕ್ಯೂಎಸಿ ವಿಭಾಗ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವಿಧ ಸಂಪ್ರದಾಯಗಳು ಮತ್ತು ಆಚರಣೆಗಳು ಇರುವ ಈ ದೇಶದಲ್ಲಿ ಇಡೀ ದೇಶಕ್ಕಾಗಿ ಇರುವ ಏಕೈಕ ಗ್ರಂಥವೆಂದರೆ ಅದು ಸಂವಿಧಾನ. ವಿವಿಧ ಧರ್ಮಗಳಿಗೆ ಅವರವರ ಪವಿತ್ರ ಧರ್ಮಗ್ರಂಥಗಳಿರಬಹುದು. ಆದರೆ ಇಡೀ ದೇಶದ ಜನರ ಹಕ್ಕುಗಳನ್ನು ರಕ್ಷಿಸುವ ಏಕೈಕ ಗ್ರಂಥ ಸಂವಿಧಾನ ಎಂದರು.
ಸಂವಿಧಾನ ಇಲ್ಲದಿದ್ದಲ್ಲಿ ಹಿಂದುಳಿದ ವರ್ಗದವರು ಮತ್ತು ಕಡು ಬಡವರು ಉನ್ನತ ಸ್ಥಾನಕ್ಕೆ ಏರುತ್ತಿರಲಿಲ್ಲ. ಪರಿಶಿಷ್ಟ ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಲು ಸಂವಿಧಾನವೇ ಕಾರಣ. ಸಾಮಾಜಿಕ ನ್ಯಾಯ, ಹೆಣ್ಣು-ಗಂಡು ಎಲ್ಲರೂ ಸಮಾನರು ಎಂಬುದು ಸಂವಿಧಾನದ ತತ್ವ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸಿದ್ದರು.ಎಂಸಿಸಿಎಸ್ ನಿರ್ದೇಶಕ ಡಾ.ರಾಜೇಂದ್ರ ಚೆನ್ನಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅರ್ಚನ ಕೆ. ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.