
ಶಿರಾಳಕೊಪ್ಪ (ಶಿಕಾರಿಪುರ): ಪಟ್ಟಣದ ವಿರಕ್ತಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿರುವ ವೀರಬಸವ ದೇವರು ಪುರಪ್ರವೇಶ ಮೆರವಣಿಗೆಯಲ್ಲಿ ಶುಕ್ರವಾರ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಆನವಟ್ಟಿ ರಸ್ತೆಯ ಚೌಡಮ್ಮ ದೇವಸ್ಥಾನದಿಂದ ಸಾರೋಟಿನಲ್ಲಿ ಮರಿ ಸ್ವಾಮೀಜಿ ಮೆರವಣಿಗೆ ಆರಂಭಗೊಂಡಿತು. ಡೊಳ್ಳು, ತಾಳಮದ್ದಲೆಯೊಂದಿಗೆ ಮೆರವಣಿಗೆ ಬರುತ್ತಿದ್ದಂತೆ ಮಹಿಳೆಯರು ಆರತಿ ಎತ್ತಿ, ಹೂವು, ಅಕ್ಷತೆ ಹಾಕಿ ಸ್ವಾಗತಿಸಿದರು.
ಮಾರ್ಗದ ಮಧ್ಯೆ ಗಣಪತಿ, ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಪಾದಯಾತ್ರೆಯಲ್ಲಿ ಉಪಸ್ಥಿತರಿದ್ದರು.
‘12ನೇ ಶತಮಾನದಿಂದಲೂ ಅಸ್ತಿತ್ವದಲ್ಲಿರುವ ವಿರಕ್ತಮಠವು ಪಟ್ಟಣದಲ್ಲಿ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆ ಕೇಂದ್ರವಾಗಿ ಗುರುತಿಸಿಕೊಂಡಿದೆ. ವಿಜಯನಗರ ಕಾಲದ ನಂತರ ಕೋರಿ ಟೋಪಿ ಸ್ವಾಮೀಜಿಯಿಂದ ಮಠಕ್ಕೆ ದೊರತೆ ಶ್ರೇಯಸ್ಸಿನ ಇತಿಹಾಸವು ಇಂದಿಗೂ ಜೀವಂತವಾಗಿದೆ. ನೂತನ ಸ್ವಾಮೀಜಿ ನೇಮಕ, ಮೆರವಣಿಗೆ ಮಠದ ಇತಿಹಾಸಕ್ಕೆ ಗೌರವ ತರುವ ಕೆಲಸವಾಗಿದೆ’ ಎಂದು ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಠದ ಆವರಣದಲ್ಲಿ ಸಂಜೆ ನಡೆದ ಗೌರವಾರ್ಪಣೆ, ಆಶೀರ್ವಚನ ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮುಖಂಡರು, ವಿವಿಧ ಮಠಾಧೀಶರು, ಸಂಘ– ಸಂಸ್ಥೆ ಪ್ರತಿನಿಧಿಗಳು, ಸ್ಥಳೀಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.