ADVERTISEMENT

ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 4:50 IST
Last Updated 26 ನವೆಂಬರ್ 2020, 4:50 IST

ಶಿವಮೊಗ್ಗ: ‘ಭದ್ರಾವತಿ ವಿಐಎಸ್ಎಲ್ ಕಾರ್ಖಾನೆಗೆ ₹ 6 ಸಾವಿರ ಕೋಟಿ ತರುತ್ತೇವೆ, ಜೀರ್ಣೋದ್ದಾರ ಮಾಡುತ್ತೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಮಾತು ಕೊಟ್ಟಿದ್ದರು ಆದರೆ, ಆರು ರೂಪಾಯಿಯೂ ಬರಲಿಲ್ಲ’ ಎಂದು ಕಾರ್ಖಾನೆಯ ಹಿರಿಯ ಕಾರ್ಮಿಕ ಮುಖಂಡ ಬಾಲಕೃಷ್ಣ ಟೀಕಿಸಿದರು.

‘ಚುನಾವಣೆ ಪೂರ್ವದಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿವೇ ನಮ್ಮ ಧ್ಯೇಯ ಎಂದರು. ಕೇಂದ್ರ ಸಚಿವರನ್ನು ಕರೆಯಿಸಿ, ₹ ಆರು ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಭರವಸೆ ಕೊಡಿಸಿದ್ದರು. ಈಗ ಅವರೇ ಕಾರ್ಖಾನೆಯನ್ನು ಖಾಸಗೀಕರಣ ಮಾಡಲು ಹೊರಟ್ಟಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಖಾಸಗೀಕರಣ ಬೇಡ ಎಂದು ಸಂಸದ ರಾಘವೇಂದ್ರ ಅವರ ಮನೆ, ಕಚೇರಿ, ದೆಹಲಿಯ ಕಚೇರಿಗೆಲ್ಲ ಭೇಟಿ ನೀಡಿ, ಮನವಿ ಕೊಟ್ಟಿದ್ದಾಯ್ತು. ಯಾವುದೇ ಪ್ರಯೋಜನವಾಗಲಿಲ್ಲ. ವಿಐಎಸ್ಎಲ್ ಕಾರ್ಖಾನೆ ಖರೀದಿಗೆ ಬರುತ್ತಿರುವುದು ಯಾರು ಅನ್ನುವುದನ್ನು ಗೌಪ್ಯವಾಗಿ ಇರಿಸಲಾಗಿದೆ. ಮಾಹಿತಿ ಹಕ್ಕಿನಲ್ಲಿ ಕೇಳದರೂ ಮಾಹಿತಿ ನೀಡುತ್ತಿಲ್ಲ. ಈಗ ಬರುತ್ತಿರುವವರು ಕಾರ್ಖಾನೆ ನಡೆಸುತ್ತಾರೋ, ರಿಯಲ್ ಎಸ್ಟೇಟ್ ದಂಧೆ ಮಾಡಲು ಬರುತ್ತಿದ್ದಾರೋ ಅನ್ನುವುದು ಗೊತ್ತಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ರಚನೆ: ವಿಐಎಸ್ಎಲ್ ಖಾಸಗೀಕರಣದ ವಿರುದ್ಧ ಹೋರಾಟ ನಡೆಸಲು ವಿಐಎಸ್ಎಲ್ ಉಳಿಸಿ ಹೋರಾಟ ಸಮಿತಿ ರಚಿಸಲಾಗಿದೆ. ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದಾಗಿ ವಿಐಎಸ್ಎಲ್ ಸೊರಗಿದೆ. ಖಾಸಗೀಕರಣ ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸಲು ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.

ಸಮಿತಿಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ ಸೇರಿ ಸರ್ವ ಪಕ್ಷದ ಮುಖಂಡರು ಇರಲಿದ್ದಾರೆ. ಭದ್ರಾವತಿ ಶಾಸಕ ಸಂಗಮೇಶ್ವರ್ ಅವರು ಹೋರಾಟ ಸಮಿತಿಯ ಗೌರವ ಅಧ್ಯಕ್ಷರಾಗಿದ್ದಾರೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಐಎಸ್ಎಲ್ ಕಾರ್ಮಿಕ ಸಂಘದ ಜಗದೀಶ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಚಂದ್ರೇಗೌಡ, ಜೆಡಿಎಸ್ ಅಧ್ಯಕ್ಷ ಕರುಣಾಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಣಿಶೇಖರ್, ಅಜಿತ್ ಅಪ್ಪಾಜಿಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.