ಶಿವಮೊಗ್ಗ: ಮತಗಳ್ಳತನದ ಮೂಲಕ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡುತ್ತಿದೆ. ಈ ಅಕ್ರಮದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಜನ ಜಾಗೃತಿ ಮೂಡಿಸಬೇಕು ಎಂದು ಎಐಸಿಸಿ ರಾಷ್ಟ್ರೀಯ ಕಾರ್ಯದರ್ಶಿ ಮಯೂರ್ ಜಯಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷದ ‘ವೋಟ್ ಚೋರ್ ಗದ್ದಿ ಚೋಡ್' ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಶನಿವಾರ ನಗರದ ಆರ್.ಎಂ.ಎಲ್ ನಗರದ ಟೆಂಪೋ ಸ್ಟ್ಯಾಂಡ್ ಹತ್ತಿರ ಜಿಲ್ಲಾ ಕಾಂಗ್ರೆಸ್ ಸಮಿತಿ ದಕ್ಷಿಣ ಬ್ಲಾಕ್ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಹಾಗೂ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಪರವಾಗಿದೆ. ಆ ಕಾರಣದಿಂದಲೇ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಿತು. ಅಲ್ಲದೇ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲು ಸಾಧ್ಯವಾಯಿತು’ ಎಂದು ದೂರಿದರು.
‘ಕರ್ನಾಟಕದ ಮಹಾದೇವಪುರ ಕ್ಷೇತ್ರವೊಂದರಲ್ಲೇ 1.6 ಲಕ್ಷ ಮತಗಳ್ಳತನವಾಗಿದೆ. ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರು ಆರು ತಿಂಗಳು ಶ್ರಮಪಟ್ಟು, ಮತಗಳ್ಳತವನ್ನು ಸಾಕ್ಷಿ ಸಮೇತ ಬಯಲಿಗೆಳೆದಿದ್ದಾರೆ. 10x10 ಅಳತೆಯ ಮನೆಯಲ್ಲಿ 84 ಗುರುತಿನ ಚೀಟಿಗಳು ನೋಂದಣಿಯಾಗಿವೆ. ಆ ಮನೆ ಬಿಜೆಪಿ ನಾಯಕರಿಗೆ ಸೇರಿದೆ’ ಎಂದು ಹೇಳಿದರು.
ಅದೇ ಕ್ಷೇತ್ರದ 4,000 ಮತದಾರರಿಗೆ ವಿಳಾಸ ಮತ್ತು ಗುರುತಿನ ಪತ್ರ ಇರಲಿಲ್ಲ. ಒಟ್ಟಾರೆ ಕೇಂದ್ರ ಚುನಾವಣಾ ಆಯೋಗದ ನೆರವಿನೊಂದಿಗೆ ಬಿಜೆಪಿ ಮೋಸದ ಚುನಾವಣೆ ನಡೆಸಿದೆ ಎಂದು ದೂರಿದರು.
‘ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಪ್ರದೇಶಗಳ ಮತಪಟ್ಟಿಯಲ್ಲಿದ್ದ ಮತದಾರರನ್ನು ಬೇರೆ ಬಡಾವಣೆಗೆ ವರ್ಗಾವಣೆ ಮಾಡಲಾಗಿದೆ. ಆ ಜಾಗಕ್ಕೆ ಬಿಜೆಪಿ ಮತದಾರರನ್ನು ಸೇರಿಸಲಾಗಿದೆ. ಲೋಪಗಳ ಬಗ್ಗೆ ಆರು ತಿಂಗಳೊಳಗೆ ದೂರು ನೀಡಬೇಕು ಎಂದು ಚುನಾವಣಾ ಆಯೋಗ ಹೇಳುತ್ತದೆ. ಆದರೆ ಆರು ತಿಂಗಳು ಸಂಗ್ರಹವಾದ ಮಾಹಿತಿಯನ್ನು ಕೇಳಿದರೆ ಅದು ಡಿಲಿಟ್ ಆಗಿದೆ ಎಂದು ಚುನಾವಣಾ ಆಯೋಗ ಹೇಳುತ್ತಿದೆ’ ಎಂದು ಕಿಡಿಕಾರಿದರು.
ಬಿಹಾರದಲ್ಲಿ 65 ಲಕ್ಷ ಮತಗಳನ್ನು ಡಿಲಿಟ್ ಮಾಡಲಾಗಿದೆ. ಹರಿಯಾಣದಲ್ಲೂ ಭಾರೀ ಪ್ರಮಾಣದಲ್ಲಿ ಮತಗಳನ್ನು ತೆಗೆದು ಹಾಕಲಾಗಿದೆ. ಆ ಜಾಗಕ್ಕೆ ಬಿಜೆಪಿ ಪರ ಇರುವ ಮತದಾರರನ್ನು ಸೇರಿಸಲಾಗಿದೆ. ಇದರಿಂದ ಕೆಲವು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲಬೇಕಿದ್ದರೂ ಅಲ್ಲಿ ಅಂತರ ಒಂದೂವರೆ ಲಕ್ಷಕ್ಕೆ ಇಳಿದಿದೆ. ರಾಜ್ಯ ಚುನಾವಣಾ ಆಯೋಗವೂ ಕೇಂದ್ರ ಚುನಾವಣಾ ಅಯೋಗದ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಅಧಿಕಾರಿಗಳನ್ನು ಕೇಂದ್ರ ಚುನಾವಣಾ ಆಯೋಗ ತನ್ನ ಹಿಡಿತದಲ್ಲಿಟ್ಟುಕೊಂಡಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ಬಾನು, ಪರಿಶಿಷ್ಟ ಜಾತಿ ಅಲೆಮಾರಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್, ರಮೇಶ್ ಶಂಕರಘಟ್ಟ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಂಪಾಷಾ, ಪ್ರಮುಖರಾದ ಸಿ.ಎಸ್. ಚಂದ್ರಭೂಪಾಲ್, ಎನ್. ರಮೇಶ್, ಎಚ್.ಸಿ. ಯೋಗೀಶ್, ಶಿವುಕುಮಾರ್, ಶರತ್ ಮರಿಯಪ್ಪ, ಶ್ರೀನಿವಾಸ್ ಕರಿಯಣ್ಣ, ಕಲಗೋಡು ರತ್ನಾಕರ್, ಆರ್. ರಾಜಶೇಖರ್, ವಿಜಯಲಕ್ಷ್ಮಿ ಪಾಟೀಲ್, ಪಿ.ಎಸ್. ಗಿರೀಶರಾವ್, ದಿನೇಶ್ ಪಟೇಲ್, ಎಸ್.ಟಿ. ಚಂದ್ರಶೇಖರ್, ಎಚ್.ಪಿ. ಗಿರೀಶ್, ಅರ್ಚನಾ ನಿರಂಜನ್, ಸ್ಟೆಲ್ಲಾ ಮಾರ್ಟಿನ್, ನಾಜೀಮಾ, ಚಂದ್ರಿಕಾ, ಸಮೀನಾ ಕೌಸರ್, ಪ್ರತಿಭಾ, ಮಂಜುಳಾ, ಜಯಂತಿ, ರೇಖಾ, ಪುಷ್ಪಾ, ರೇಖಾ ಕೃಷ್ಣಮೂರ್ತಿ, ಆಶಾ, ಲಕ್ಷ್ಮಿ ಇದ್ದರು.
ಬಿಜೆಪಿಯ ವೋಟ್ ಚೋರಿಯ ಬಗ್ಗೆ ಮನೆಮನೆಗಳಲ್ಲೂ ಪ್ರಚಾರ ಮಾಡಬೇಕಿದೆ. ಅಂಬೇಡ್ಕರ್ ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವದ ಬೇರು ಗಟ್ಟಿಗೊಳಿಸಬೇಕಿದೆಶ್ವೇತಾ ಬಂಡಿ ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ
ಜಿಲ್ಲೆಯಲ್ಲಿ ಏಳು ಲಕ್ಷ ಸಹಿ ಸಂಗ್ರಹದ ಗುರಿಯಿದೆ. ಅದನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಬೀದಿ ಬೀದಿಗೂ ಹೋಗಿ ಮತಗಳ್ಳತನ ಮಾಡಿದ ಕೇಂದ್ರ ಸರ್ಕಾರದ ವಿರುದ್ದ ಪ್ರಚಾರ ಮಾಡಲಾಗುವುದುಆರ್.ಪ್ರಸನ್ನಕುಮಾರ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.