ಶಿವಮೊಗ್ಗ:ಅಪರೂಪಕ್ಕೆ ಕಾಣಸಿಗುವ ಬಿಳಿ ಬಣ್ಣದ ನಾಗರ ಹಾವನ್ನು ಶಿವಮೊಗ್ಗದ ಉರಗ ರಕ್ಷಕ ಸ್ನೇಕ್ ಕಿರಣ್ ಅವರುವಿಶ್ವ ಹಾವು ದಿನವಾದ ಶನಿವಾರದಂದು ರಕ್ಷಿಸಿದ್ದಾರೆ.
ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯ ರಾಮನಕೊಪ್ಪದ ನಾರಾಯಣ ಹೃದಯಾಲಯ ಹಿಂಭಾಗದಲ್ಲಿನ ರಂಗಪ್ಪಗೌಡರ ತೋಟದ ಮನೆಯಲ್ಲಿನ ಕಟ್ಟಿಗೆ ತುಂಡುಗಳ ರಾಶಿಯಲ್ಲಿ ಬಿಳಿ ನಾಗರ ಹಾವುಅಡಗಿತ್ತು. ಅದನ್ನು ಹಿಡಿದು ಚೀಲದಲ್ಲಿ ಹಾಕಿಕೊಂಡು ತಂದ ಸ್ನೇಕ್ ಕಿರಣ್ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದರು. ನಂತರ ಕಾಡಿಗೆ ಬಿಡಲಾಯಿತು.
ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುವುದನ್ನು ಹವ್ಯಾಸವಾಗಿಸಿಕೊಂಡಿರುವ ಕಿರಣ್, ಇಲ್ಲಿಯವರೆಗೆ ಸಾವಿರಾರು ಉರಗಗಳನ್ನು ರಕ್ಷಿಸಿದ್ದಾರೆ. ‘ಇದು ನಾನು ರಕ್ಷಿಸಿರುವ ಎರಡನೇ ಬಿಳಿ ಬಣ್ಣದ ನಾಗರ ಹಾವು’ ಎಂದು ಕಿರಣ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಾಸ್ತವವಾಗಿ ಬಿಳಿ ಬಣ್ಣದ ನಾಗರಹಾವು ಎಂಬುದು ಇಲ್ಲ. ಚರ್ಮಕ್ಕೆ ವರ್ಣದ್ರವ್ಯದ ಕೊರತೆಯಿಂದ ಹುಟ್ಟುವಾಗಲೇ ಬಿಳಿ ಬಣ್ಣದಲ್ಲಿ ಹುಟ್ಟಿರುತ್ತವೆ. ವರ್ಣ ದ್ರವ್ಯದ ಕೊರತೆಯಿಂದ ಹುಟ್ಟುವ ಜೀವಿಗಳಿಗೆ ‘ಅಲ್ಬಿನೊ’ ಎಂದು ಕರೆಯುತ್ತಾರೆ ಎಂಬುದಾಗಿ ಕಿರಣ್ ಮಾಹಿತಿ ನೀಡಿದರು.
ಮೂರು ಅಡಿ ಉದ್ದವಿರುವ ಬಿಳಿ ನಾಗರವನ್ನು ಶಿವಮೊಗ್ಗದ ಅರಣ್ಯ ಇಲಾಖೆ ಕಚೇರಿ ಎದುರು ಸ್ವಲ್ಪ ಹೊತ್ತು ಆಟವಾಡಿಸಿದ ಕಿರಣ್, ಅಲ್ಲಿ ನೆರೆದವರಿಗೆ ಹಾಗೂ ಕಚೇರಿ ಸಿಬ್ಬಂದಿಗೆ ಅದರ ವಿಶೇಷತೆಗಳ ಬಗ್ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.