ADVERTISEMENT

ಸಾಲ ಪಡೆದವರಿಂದ ಕಿರುಕುಳ ಆರೋಪ: ಮಕ್ಕಳೊಂದಿಗೆ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 15:54 IST
Last Updated 15 ಜನವರಿ 2022, 15:54 IST
ಆರೋಪಿ ಸಂತೋಷ್
ಆರೋಪಿ ಸಂತೋಷ್   

ಹೊಳೆಹೊನ್ನೂರು: ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ತಮ್ಮಿಂದ ಸಾಲ ಪಡೆದುಕೊಂಡಿದ್ದ ವ್ಯಕ್ತಿ ಮಾಡಿದ ಅಪಪ್ರಚಾರದಿಂದ ಮನನೊಂದು ಸಮೀಪದ ಯಡೇಹಳ್ಳಿಯ ಮಹಿಳೆಯೊಬ್ಬರು ತಮ್ಮ ಇಬ್ಬರು ಮಕ್ಕಳೊಂದಿಗೆ ಶುಕ್ರವಾರ ಸಂಜೆ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಯಡೇಹಳ್ಳಿಯ ನಿವಾಸಿ ಸಂತೋಷಕುಮಾರ್ ಅವರ ಪತ್ನಿ ವೀಣಾ (32), ಮಕ್ಕಳಾದ ಜ್ಞಾನವಿ (7), ದೇವಿಕಾ (1) ಮೃತಪಟ್ಟವರು‌.

ಸಂತೋಷ ಕುಮಾರ್ ಹಾಗೂ ವೀಣಾ ಅವರು ಅರಹತೊಳಲು ಗ್ರಾಮದ ಸಂತೋಷ ಎಂಬುವವರಿಗೆ ₹ 8 ಲಕ್ಷ ಸಾಲ ನೀಡಿದ್ದರು. ಕೆಲ ದಿನಗಳಾದರೂ ಸಾಲ ಮರುಪಾವತಿಸದಿದ್ದಾಗ ವೀಣಾ ಅವರು ಹಣ ವಾಪಸ್‌ ನೀಡುವಂತೆ ಕೇಳಿದ್ದರು. ಸಾಲ ಪಡೆದಿದ್ದ ವ್ಯಕ್ತಿಯು ವೀಣಾ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಅವರ ಸಂಬಂಧಿಕರು ಹಾಗೂ ಊರಿನಲ್ಲಿ ಅಪಪ್ರಚಾರ ಮಾಡಿದ್ದರು ಎಂದು ಆರೋಪಿಸಲಾಗಿದೆ.

ADVERTISEMENT

‘ಸಾಲ ವಾಪಸ್‌ ಕೇಳಲು ಹೋದಾಗ ಸಂತೋಷ ಹಾಗೂ ಆತನ ಪತ್ನಿ ಆಶಾ ಗಲಾಟೆ ಮಾಡಿದ್ದರು. ಪತ್ನಿ ನಡತೆ ಸಂಬಂಧ ಅಪಪ್ರಚಾರ ಮಾಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂತೋಷ ಹಾಗೂ ಆಶಾ ಅವರಅಪಪ್ರಚಾರ ಹಾಗೂ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಅವರೇ ಕಾರಣ ಎಂದು ಪತ್ನಿ ಬರೆದ ಡೆತ್‌ನೋಟ್‌ ಕೂಡ ನಾಲೆ ಬಳಿ ಸಿಕ್ಕಿದೆ’ ಎಂದು ವೀಣಾ ಪತಿ ಸಂತೋಷಕುಮಾರ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಹಾಗೂ ಆಶಾ ಅವರನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.