ADVERTISEMENT

ಜ್ಯೋತಿಷ್ಯ ಜಾಹೀರಾತು ನಂಬಿ ₹ 9 ಲಕ್ಷ ಕಳೆದುಕೊಂಡ ಮಹಿಳೆ !

-

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 14:37 IST
Last Updated 28 ಮಾರ್ಚ್ 2024, 14:37 IST
   

ಶಿವಮೊಗ್ಗ: ಯೂ ಟ್ಯೂಬ್‌ನಲ್ಲಿ ಜ್ಯೋತಿಷ್ಯ ಹೇಳುವವರ ಜಾಹಿರಾತು ನಂಬಿ ಕರೆ ಮಾಡಿದ ನಗರದ ಮಹಿಳೆಯೊಬ್ಬರು ಆತನ ಮಾತಿಗೆ ಮರುಳಾಗಿ ₹9 ಲಕ್ಷ ಹಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಸಿಇಎನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮಹಿಳೆಯೊಬ್ಬರು ತಮ್ಮ ಕುಟುಂಬದಲ್ಲಿ ಆ ಸಮಸ್ಯೆಯ ಬಗ್ಗೆ ಪರಿಹಾರಕ್ಕಾಗಿ ಹುಡುಕಾಟ ನಡೆಸಿದ್ದರು. ಅದೇ ಸಂದರ್ಭದಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಾರವಾಗಿದ್ದ ಜ್ಯೋತಿಷ್ಯದ ಜಾಹೀರಾತು ನೋಡಿ ಅದರಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದರು.

ಮಹಿಳೆಯ ಕಷ್ಟ ಆಲಿಸಿದ ಜ್ಯೋತಿಷಿ ಹೆಸರಿನ ಆ ವ್ಯಕ್ತಿ ನಿಮಗೆ ಬಹುದೊಡ್ಡ ಕಂಟಕವಿದೆ. ಅದಕ್ಕೆ ಅಗತ್ಯ ಪರಿಹಾರಗಳನ್ನು ಕಲ್ಪಿಸಬೇಕು ಎಂದು ಹೇಳಿ, ಆಗಾಗ ಗೂಗಲ್ ಪೇ ಮೂಲಕ ಮಹಿಳೆಯಿಂದ ₹ 6,37,850 ಪಡೆದಿದ್ದಾನೆ. ನಂತರ ಮಹಿಳೆಯೊಂದಿಗೆ ಏಕಾಏಕಿ ಸಂಪರ್ಕ ಕಳೆದುಕೊಂಡಿದ್ದಾರೆ. ಈ ವೇಳೆ ಅವರಿಗೆ ಅನುಮಾನ ಬಂದಿದೆ.

ADVERTISEMENT

ಕೆಲ ದಿನಗಳ ನಂತರ ಪುನಃ ಮಹಿಳೆಗೆ ಕರೆ ಮಾಡಿದ್ದ ಆ ವ್ಯಕ್ತಿ ’ತಾನು ಅಪಘಾತಕ್ಕೀಡಾಗಿ ತಲೆಗೆ ‍ಪೆಟ್ಟು ಬಿದ್ದು ಇಷ್ಟು ದಿನ ಕೋಮಾದಲ್ಲಿದ್ದೆನು. ಈಗ ಚೇತರಿಸಿಕೊಂಡಿದ್ದೇನೆ. ನಾನು ನಿಮ್ಮ ಹಣ ಹೊಂದಿಸಲು ಆಗುತ್ತಿಲ್ಲ. ನಾನು ಆರಾಧಿಸುವ ದೇವರ ದೇವಸ್ಥಾನದ ಮುಖ್ಯಸ್ಥನ ನಂಬರ್ ಕೊಡುತ್ತೇನೆ ಅವರಿಗೆ ಪೋನ್ ಮಾಡಿ ನಿಮ್ಮ ಹಣ ಅವರು ವಾಪಸ್‌ ಕೊಡುತ್ತಾರೆ‘ ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಅದನ್ನು ನಂಬಿದೆ ಮಹಿಳೆ ಆ ನಂಬರ್‌ಗೂ ಕಾಲ್ ಮಾಡಿದ್ದಾರೆ. ಆತ ಕೂಡ ನಿಮಗೆ ಹಣ ಬರಬೇಕಾದರೆ ಸ್ವಲ್ಪ ಖರ್ಚಾಗುತ್ತದೆ. ನನ್ನ ಮೊಬೈಲ್ ನಂಬರ್‌ನ ಗೂಗಲ್‌ಪೇ ಮೂಲಕ ಹಣ ಹಾಕಿ ಎಂದು ಹೇಳಿದ್ದಾನೆ. ಆ ಮಾತು ನಂಬಿ ಆತನ ಅಕೌಂಟ್‌ಗೂ ಮಹಿಳೆ ಹಣ ಹಾಕಿದ್ದಾರೆ. ಇಬ್ಬರಿಗೂ ಒಟ್ಟು ₹9,44,850  ವರ್ಗಾವಣೆ ಮಾಡಿದ್ದು, ನಂತರ ಆರೋಪಿಗಳು ಮೊಬೈಲ್‌ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಅ ನಂತರವೇ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದೆ. 

ದೂರು ದಾಖಲಿಸಿಕೊಂಡ ಸಿ.ಇ.ಎನ್ ಠಾಣೆ ಪೊಲೀಸರು ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.