ADVERTISEMENT

ಮಹಿಳೆಯರು ಕೀಳರಿಮೆಯಿಂದ ಹೊರಬರಬೇಕು: ಸಚಿವ ಜ್ಞಾನೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2023, 5:49 IST
Last Updated 26 ಫೆಬ್ರುವರಿ 2023, 5:49 IST
ತೀರ್ಥಹಳ್ಳಿ ಪಟ್ಟಣದ ಮಾಧವ ಮಂಗಲ ಸಭಾಭವನದಲ್ಲಿ ಶನಿವಾರ ನಡೆದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ತೀರ್ಥಹಳ್ಳಿ ಪಟ್ಟಣದ ಮಾಧವ ಮಂಗಲ ಸಭಾಭವನದಲ್ಲಿ ಶನಿವಾರ ನಡೆದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.   

ತೀರ್ಥಹಳ್ಳಿ: ಹೆಣ್ಣು ಕೇವಲ ಮನೆಗೆ ಮಾತ್ರ ಸೀಮಿತ ಎಂಬ ಚೌಕಟ್ಟಿನಿಂದ ಹೊರಬರಬೇಕಿದೆ. ಕೀಳರಿಮೆ ಅಧೋಗತಿಗೆ ತಳ್ಳುತ್ತದೆ. ಮಹಿಳೆಯರು ಆರ್ಥಿಕ, ಸಾಂಸ್ಕೃತಿಕ ಅರಿವು ಹೊಂದುವ ಮೂಲಕ ಕೀಳರಿಮೆ ತೊಲಗಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಲಹೆ ನೀಡಿದರು.

ಪಟ್ಟಣದ ಮಾಧವ ಮಂಗಲ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ ವತಿಯಿಂದ ನಡೆದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ ರಕ್ಷಣೆ, ವಾಯುಯಾನ, ನೌಕಾದಳ, ಉದ್ಯೋಗ, ವ್ಯಾಪಾರ ಕ್ಷೇತ್ರದಲ್ಲಿ ಮಹಿಳೆಯರು ಎತ್ತರದ ಸ್ಥಾನವನ್ನು ಅಲಂಕರಿಸಿದ್ದಾರೆ. ಹಗಲು-ರಾತ್ರಿ ತನ್ನ ಕುಟುಂಬವನ್ನು ಕಾಪಾಡುವ ರೀತಿಯಲ್ಲಿ ದೇಶವನ್ನು ಜೋಪಾನ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ಗ್ರಾಮಾಭಿವೃದ್ದಿ ಯೋಜನೆ ಮಹಿಳೆಯರಲ್ಲಿ ಸ್ವಾಭಿಮಾನ ಬೆಳೆಸಿದೆ. ಯೋಜನೆಯಡಿ ದೊರೆತ ಸಾಲ ಸದ್ಬಳಕೆ ಮಾಡಿಕೊಂಡು ವಾಪಸ್ಸು ಪಾವತಿ ನಿಷ್ಠೆ ತೋರಿದ್ದಾರೆ. ಯೋಜನೆಯ ಚಿಂತನೆ ದೇಶಕ್ಕೆ ವಿಸ್ತರಿಸಬೇಕು ಎಂಬ ಪ್ರಯತ್ನವನ್ನು ನರೇಂದ್ರ ಮೋದಿ ಅವಲೋಕನ ಮಾಡುತ್ತಿದ್ದಾರೆ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶೆಟ್ಟಿ, ಶಿವಮೊಗ್ಗ ಬಿ.ಸಿ. ಟ್ರಸ್ಟ್‌ ನಿರ್ದೇಶಕ ಚಂದ್ರಶೇಖರ್‌, ಜನಜಾಗೃತಿ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ, ಮಲೆನಾಡು ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಪ್ರಸಿಲ್ಲಾ ಪಿಂಟೊ, ಆಪ್ತ ಸಮಾಲೋಚಕಿ ವಿನುತಾ ಮುರುಳಿದರ್‌, ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೇಮಲೀಲಾ, ತಾಲ್ಲೂಕು‌ ಕರವೇ ಅಧ್ಯಕ್ಷೆ ಜ್ಯೋತಿ ದಿಲೀಪ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.