ಸಾಗರ: ಹಲವು ಹೊಸ ಪ್ರಸಂಗಗಳು ಬರುತ್ತಿದ್ದರೂ ಪೌರಾಣಿಕ ಪ್ರಸಂಗಗಳಿಂದ ಯಕ್ಷಗಾನ ಹಾಗೂ ತಾಳಮದ್ದಲೆ ಕಲೆಯ ಸತ್ವ ಉಳಿದಿದೆ ಎಂದು ವೈದ್ಯ ಲೇಖಕ ಡಾ.ಎಚ್.ಎಸ್.ಮೋಹನ್ ಹೇಳಿದರು.
ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ಶ್ರೀರಾಜರಾಜೇಶ್ವರಿ ಕೃಪಾಪೋಷಿತ ವಂಶವಾಹಿನಿ ಯಕ್ಷಮೇಳ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಮೇಶ್ ಹೆಗಡೆ ಗುಂಡೂಮನೆ ರಚಿಸಿರುವ ‘ದ್ರೋಣ ವಿಜಯ’ ನೂತನ ತಾಳಮದ್ದಲೆ ಪ್ರಸಂಗವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಪ್ರಯೋಗಶೀಲತೆಯ ಹೆಸರಿನಲ್ಲಿ ಹಲವು ಹೊಸ ಪ್ರಸಂಗಗಳಿಂದ ಯಕ್ಷಗಾನ ಕಲೆಯ ಮೂಲ ಆಶಯಗಳಿಗೆ ಧಕ್ಕೆ ಉಂಟಾಗುತ್ತಿದೆ. ಹೊಸ ಪ್ರಸಂಗಗಳು ಕಲೆಯ ಮೂಲ ಸ್ವರೂಪಕ್ಕೆ ನಿಷ್ಟವಾಗಿರಬೇಕು. ಪೌರಾಣಿಕ ಪ್ರಸಂಗಗಳು ಆ ಕೆಲಸವನ್ನು ಮೊದಲಿನಿಂದಲೂ ಮಾಡುತ್ತಿವೆ ಎಂದು ಅವರು ಹೇಳಿದರು.
ಯಕ್ಷಗಾನ ಪೋಷಕರಾದ ಪದ್ಮಾವತಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಸರ ಕಾರ್ಯಕರ್ತ ಚಕ್ರವಾಕ ಸುಬ್ರಮಣ್ಯ, ಬಿ.ಕೆ.ಲಕ್ಷ್ಮಿನಾರಾಯಣ ಕೌಲಕೈ ಇದ್ದರು.
ನಂತರ ದ್ರೋಣ ವಿಜಯ ತಾಳಮದ್ದಲೆ ಪ್ರಸಂಗದ ಪ್ರಸ್ತುತಿ ನಡೆಯಿತು. ಸೂರ್ಯನಾರಾಯಣ ಹೆಗಡೆ ಗುಂಡೂಮನೆ, ಸೃಜನ್ ಗಣೇಶ್ ಹೆಗಡೆ, ಶರತ್ ಜಾನಕೈ, ನಾಗಭೂಷಣ ಕೇಡಲಸರ, ಅರುಣ್ ಬೆಂಕಟವಳ್ಳಿ, ರವಿಶಂಕರ್ ಭಟ್, ಅಶೋಕ್ ಕುಮಾರ್ ಹೆಗಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.