ಮಡಿಕೇರಿ: ಕೊರೊನಾದಿಂದ ಮದುವೆಗಳೂ ಸರಳವಾಗಿ ನಡೆಯುವ ಸ್ಥಿತಿ ಬಂದಿದೆ. ಇಲ್ಲಿನ ರಾಜರಾಜೇಶ್ವರಿ ದೇಗುಲದಲ್ಲಿ ಗುರುವಾರ ಕುಟುಂಬದ ಕೆಲವೇ ಮಂದಿ ಸೇರಿಕೊಂಡು ಮದುವೆ ನಡೆಸಿದ್ದಾರೆ.
ಮಡಿಕೇರಿಯ ರಜಿತ್ ಮತ್ತು ಕಾಸರಗೋಡು ತಾಲ್ಲೂಕಿನ ಗ್ರಾಮವೊಂದರ ಅನುಷಾಗೆ ಮದುವೆ ನಿಶ್ಚಿತವಾಗಿತ್ತು. ಸುಳ್ಯದ ಪುರಭವನದಲ್ಲಿ ಮದುವೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು. 500 ಆಹ್ವಾನ ಪತ್ರಿಕೆಗಳನ್ನು ಹಂಚಿಕೆ ಮಾಡಿದ್ದರು. ಪುರಭವನಕ್ಕೆ ಮುಂಗಡ ಹಣವನ್ನು ಪಾವತಿಸಿದ್ದರು. ಆದರೆ, ಕೊರೊನಾ ಆ ಕುಟುಂಬದ ಸಂಭ್ರಮವನ್ನೂ ಕಿತ್ತುಕೊಂಡಿದೆ. ದೇಶವೇ ಲಾಕ್ಡೌನ್ ಆಗಿದ್ದು ಮದುವೆಯ ಸ್ಥಳವೂ ಬದಲಾಗಿತ್ತು.
ಮಡಿಕೇರಿ ನಗರದ ಹೊರವಲಯದ ರಾಜರಾಜೇಶ್ವರಿ ದೇವಾಲಯದಲ್ಲಿ ಕೇವಲ ಏಳು ಜನರು ಭಾಗಿಯಾಗಿ ಮದುವೆ ನೆರವೇರಿಸಿದರು. ವಧು- ವರರ ತಂದೆ, ತಾಯಿ ಮತ್ತು ಅರ್ಚಕರು ಮಾತ್ರವೇ ಮದುವೆಯಲ್ಲಿ ಭಾಗಿಯಾಗಿದ್ದರು.
‘ಕುಟುಂಬದ ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಆಗಬೇಕೆಂಬ ಆಸೆಯಿತ್ತು. ಆದರೆ, ಕೊರೊನಾ ವೈರಸ್ನಿಂದ ಇಡೀ ಜಗತ್ತಿನಲ್ಲಿ ಆಂತಕ ಉಂಟಾಗಿದೆ. ಹೀಗಾಗಿ, ಈ ರೀತಿ ಸರಳವಾಗಿ ಮದುವೆ ಆಗಿದ್ದೇವೆ’ ಎಂದು ರಜಿತ್ ಬೇಸರ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.