ADVERTISEMENT

ಶಿಕ್ಷಕರ ವರ್ಗಾವಣೆ: ದಾಖಲೆ ಗೊಂದಲ ನಿವಾರಣೆಗೆ ಆಗ್ರಹ

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 15:32 IST
Last Updated 19 ಜೂನ್ 2019, 15:32 IST
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶಿಕ್ಷಕರು ಮನವಿ ಸಲ್ಲಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಶಿಕ್ಷಕರು ಮನವಿ ಸಲ್ಲಿಸಿದರು.   

ಚಿಕ್ಕಬಳ್ಳಾಪುರ: ಶಿಕ್ಷಕರ ವರ್ಗಾವಣೆಗೆ ಅಗತ್ಯ ದಾಖಲೆಗಳ ಬಗ್ಗೆ ಇರುವ ಹಲವು ಗೊಂದಲಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿಕ್ಷಕರು ಬುಧವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಜಿ.ನಾಗೇಶ್‌ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯ ಕೆ.ಜಿ.ಶ್ರೀನಿವಾಸ್, ‘ವರ್ಗಾವಣೆ ಮಾರ್ಗಸೂಚಿಯನ್ನು ಕಚೇರಿ ಪ್ರಕಟಣಾ ಫಲಕದಲ್ಲಿ ಪ್ರಕಟಿಸಬೇಕು. ಪರಸ್ಪರ ವರ್ಗಾವಣೆ, ಗಂಭೀರ ಕಾಯಿಲೆ ಪ್ರಕರಣ, ಪತಿ –ಪತ್ನಿ ಪ್ರಕರಣಗಳ ಕುರಿತು ಅರ್ಜಿ ಸಲ್ಲಿಸಲು ಅಗತ್ಯ ಅರ್ಜಿ ನಮೂನೆಗಳನ್ನು ಪ್ರಕಟಣಾ ಫಲಕದಲ್ಲಿ ಪ್ರದರ್ಶಿಸಬೇಕು’ ಎಂದು ಹೇಳಿದರು.

‘ಶಿಕ್ಷಕರು ತಮ್ಮ ಶಾಲಾ ಕರ್ತವ್ಯ ನಿರ್ವಹಿಸಿ ಶಾಲಾ ಸಮಯದ ನಂತರ ಕಚೇರಿಗೆ ಬರಬೇಕಾಗಿದೆ. ಇದರಿಂದ ಅನಾನುಕೂಲವಾಗುತ್ತಿದೆ. ಆದ್ದರಿಂದ ಆದ್ದರಿಂದ ವರ್ಗಾವಣೆ ಮುಗಿಯುವವರೆಗೆ ತಮ್ಮ ಕಚೇರಿ ಸಿಬ್ಬಂದಿ ಒಂದು ಗಂಟೆ ಹೆಚ್ಚುವರಿ ಕೆಲಸ ನಿರ್ವಹಿಸುವಂತೆ ಆದೇಶಿಸಬೇಕು. ಶಿಕ್ಷಕರ ಸೇವಾ ಮಾಹಿತಿ ತಂತ್ರಾಂಶದಲ್ಲಿರುವ ದೋಷಗಳನ್ನು ಸರಿಪಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸುವಾಗ ಕೈತಪ್ಪಿನಿಂದ ಅಥವಾ ಮಾಹಿತಿ ಕೊರತೆಯಿಂದ ಆಗುವ ತಪ್ಪುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಸರಿಪಡಿಸಲು ಅವಕಾಶವಿದೆ. ಅದಕ್ಕೆ ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು. ವರ್ಗಾವಣೆ ಸಂಬಂಧ ಕಚೇರಿಗೆ ಬರುವ ಶಿಕ್ಷಕರೊಂದಿಗೆ ಸಿಬ್ಬಂದಿ ಸಂಯಮದಿಂದ ವರ್ತಿಸುವಂತೆ ಕ್ರಮ ವಹಿಸಬೇಕು’ ಎಂದರು.

‘ಎ ವಲಯದ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಾಗ ಇತರೆ ಜಿಲ್ಲೆ ಹಾಗೂ ನಮ್ಮ ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ಪತಿ–ಪತ್ನಿ ಪ್ರಕರಣಗಳ ಅಡಿ ಬರುವ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡಲಾಗಿದೆ. ಅದೇ ನಿಯಮವನ್ನು ನಮ್ಮ ತಾಲ್ಲೂಕಿನಲ್ಲಿಯೂ ಅನುಸರಿಸಬೇಕು. ಗರಿಷ್ಠ ಸೇವಾವಧಿ ಮುಗಿದಿರುವ ಸಿಆರ್‌ಪಿ, ಬಿಆರ್‌ಪಿಗಳನ್ನು ನಮ್ಮ ತಾಲ್ಲೂಕಿನಲ್ಲಿಯೇ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಶಿಕ್ಷಕರಾದ ಅಮರನಾರಾಣಸ್ವಾಮಿ, ಎಂ.ಆರ್.ಸುಬ್ಬಾರೆಡ್ಡಿ. ಪಿ.ಆರ್.ಸುನಿಲ್, ಗ.ನಾ.ಅಶ್ವತ್ಥ್, ಎಂ.ಕೃಷ್ಣಮೂರ್ತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.