ಹುಳಿಯಾರು: ಪರ್ಮಿಟ್ ಇಲ್ಲದೆ ಅದಿರು ಸಾಗಣೆ ಮಾಡುತ್ತಿದ್ದ 13 ಲಾರಿಗಳನ್ನು ಹುಳಿಯಾರು ಬಳಿ ತಿಪಟೂರು ಉಪ ಸಾರಿಗೆ ಅಧಿಕಾರಿ ಮಂಜುನಾಥ್ ಬುಧವಾರ ವಶಪಡಿಸಿಕೊಂಡಿದ್ದಾರೆ.
ಈ 13 ಲಾರಿಗಳು ಕೆ.ಬಿ.ಕ್ರಾಸ್ನಲ್ಲಿ ಸಂಗ್ರಹಿಸಲಾಗಿದ್ದ ಅದಿರನ್ನು ಬಳ್ಳಾರಿಗೆ ಸಾಗಿಸುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯಲ್ಲಿ ಗಣಿಗಾರಿಕೆಯನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಆದರೆ ಅದಿರು ಎಲ್ಲಿಂದ ಬಂತು ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಕೊಂಡ್ಲಿಕ್ರಾಸ್ನಲ್ಲಿ ಅಕ್ರಮ ಗಣಿಗಾರಿಕೆ ಮೂಲಕ ಅದಿರು ತೆಗೆದಿರುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಘಟನೆ ಕುರಿತು ಮಾಹಿತಿ ಪಡೆಯಲು ಉಪ ಸಾರಿಗೆ ಅಧಿಕಾರಿ ಮಂಜುನಾಥ್ `ಪ್ರಜಾವಾಣಿ~ ಸಂಪರ್ಕಕ್ಕೆ ಸಿಗಲಿಲ್ಲ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅದಿರು ಕುರಿತು ನಮಗೆ ಯಾವುದೇ ಮಾಹಿತಿಯನ್ನು ಮಂಜುನಾಥ್ ನೀಡಿಲ್ಲ. ಪ್ರಕರಣ ದಾಖಲಿಸಿಕೊಳ್ಳುವಂತೆ ಮೌಖಿಕವಾಗಿ ಸೂಚಿಸಿ ತೆರಳಿದ್ದಾರೆ. ಈ ಅದಿರು ಎಲ್ಲಿಯದು ಎಂಬುದು ಕೂಡ ಗೊತ್ತಾಗಿಲ್ಲ ಎಂದು ಹುಳಿಯಾರು ಪೊಲೀಸರು `ಪ್ರಜಾವಾಣಿ~ಗೆ ತಿಳಿಸಿದರು.
ವಶಪಡಿಸಿಕೊಂಡಿರುವ 13 ಲಾರಿಗಳಲ್ಲಿ ತಲಾ ಒಂದು ಲಾರಿಗೆ ರೂ. 13 ಸಾವಿರದಂತೆ ದಂಡ ಕಟ್ಟಿಸಿಕೊಂಡು 9 ಲಾರಿಗಳನ್ನು ಬಿಡಲಾಗಿದೆ. ಉಳಿದ 4 ಲಾರಿಗಳನ್ನು ಪೊಲೀಸ್ ಠಾಣೆ ಮುಂದೆ ನಿಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.