ADVERTISEMENT

ಅನುದಾನ ವಿಳಂಬ: ಕಂಗಾಲಾದ ರೈತರು

ನರೇಗಾದಡಿ ದನದ ಕೊಟ್ಟಿಗೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2014, 6:02 IST
Last Updated 15 ಮಾರ್ಚ್ 2014, 6:02 IST

ಚಿಕ್ಕನಾಯಕನಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಿಸಿಕೊಂಡಿರುವ ತಾಲ್ಲೂಕಿನ ರೈತರು ಹಣ ಬಿಡುಗಡೆಯಾಗದೆ ಕಂಗಾಲಾಗಿದ್ದಾರೆ.

ಅಧಿಕಾರಿಗಳು ಕೊಟ್ಟಿಗೆ ನಿರ್ಮಾಣದ ಸಾಮಗ್ರಿ, ಕಲ್ಲು ಚಪ್ಪಡಿ–ಕಂಬ ಕೊಂಡುಕೊಂಡಿ­ದ್ದಕ್ಕೆ ಬಿಲ್ ಕೇಳುತ್ತಿದ್ದಾರೆ. ಎಲ್ಲ ಒದಗಿಸಿದರೂ ಹಣ ಬಿಡುಗಡೆಗೊಳಿಸಲು ಸತಾಯಿಸುತ್ತಿದ್ದಾರೆ ಎಂದು ಫಲಾನುಭವಿಗಳು ದೂರಿದರು.

ಜಾಬ್‌ ಕಾರ್ಡ್‌ದಾರರು ಯಾವ ಕಾಮ­ಗಾರಿಯಲ್ಲಿ ಎಷ್ಟು ದಿವಸ ಕೆಲಸ ಮಾಡಿದ್ದಾರೆ ಎಂಬ ವಿವರವನ್ನು ಕಾರ್ಡ್‌ನಲ್ಲಿ ನಮೂದಿಸುವ ನಿಯಮವಿದ್ದರೂ; ಕಾರ್ಡ್ ಖಾಲಿ ಬಿಟ್ಟಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ.

ಕೂಲಿ ಹಣವನ್ನು ಗುತ್ತಿಗೆದಾರರ ಮೂಲಕ ಪಡೆದು­ಕೊಳ್ಳುವಂತೆ ಅಧಿಕಾರಿಗಳು ಹೇಳುತ್ತಿ­ದ್ದಾರೆ ಎಂದು ಕುಪ್ಪೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಣೆಕಟ್ಟೆ, ಅರಳೀಕೆರೆ ಹಾಗೂ ಹೆಸರಳ್ಳಿ ರೈತರು ದೂರಿದರು.

ದನದ ಕೊಟ್ಟಿಗೆ ನಿರ್ಮಿಸಿಕೊಳ್ಳುವಂತೆ ಗ್ರಾಮ­ಸಭೆಗಳಲ್ಲಿ ಅಧಿಕಾರಿಗಳು ದುಂಬಾಲು ಬಿದ್ದಿದ್ದರು. ₨ 35 ಸಾವಿರ ವೆಚ್ಚದಲ್ಲಿ ನಿರ್ಮಿಸಿಕೊಳ್ಳುವಂತೆ ಒತ್ತಾಯ ಮಾಡಿದ್ದರು. ಕಾಮಗಾರಿ ಪೂರ್ಣ­ಗೊಂಡು ತಿಂಗಳು ಗತಿಸಿವೆ. ಆದರೆ ಇದೀಗ ವಿಭಿನ್ನ ಸಬೂಬು ಹೇಳಿ ಹಣ ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ ಎಂದು ರೈತ ಮುಖಂಡ ಅಣೆಕಟ್ಟೆ ಶಿವಬಸವಯ್ಯ ದೂರಿದರು.

ರೈತ ಸಂಘದ ಮುರಳಿ, ಎ.ಎಂ.ಗಂಗಾಧರಯ್ಯ ಮಾತನಾಡಿ ಏಳು ದಿನದ ವಾಯಿದೆಯಲ್ಲಿ ಖಾತ್ರಿ ಕೂಲಿಯನ್ನು ಬಟವಾಡೆ ಮಾಡಬೇಕು. ಒಂದು ವೇಳೆ 15 ದಿನಕ್ಕಿಂತ ಹೆಚ್ಚಿಗೆ ಸಮಯ ತೆಗೆದು­ಕೊಂಡರೆ ಪರಿಹಾರವನ್ನೂ ನಿಡಬೇಕು ಎಂದು  19­36ರ ದಿನಗೂಲಿ ನೌಕರರ ಕಾಯಿದೆ ಹೇಳುತ್ತದೆ. ಹಾಗಿದ್ದರೂ ನಿಯಮ ಬಾಹಿರವಾಗಿ ಹಣ ತಡೆ ಹಿಡಿದಿದ್ದಾರೆ. ತಕ್ಷಣ ಹಣ ಬಿಡುಗಡೆಗೊಳಿಸ­ದಿದ್ದರೆ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಕಾನೂನು ಸಮರ ಸಾರುವುದಾಗಿ ತಿಳಿಸಿದರು.

ತಾಲ್ಲೂಕಿನಲ್ಲಿ 600ಕ್ಕೂ ಹೆಚ್ಚು ರೈತರು ದನದ ಕೊಟ್ಟಿಗೆ ನಿರ್ಮಿಸಿಕೊಂಡಿದ್ದಾರೆ. ಕಾಮ­ಗಾರಿಗೆ ಹಣ ವಿನಿಯೋಗಿಸಿದ್ದಾರೆ. ಈಗಾಗಲೇ ಮಳೆ ಸುರಿಯುತ್ತಿದೆ. ಗೊಬ್ಬರ, ಬೀಜಕ್ಕೆ ದುಡ್ಡು ಬೇಕು. ಇರುವ ದುಡ್ಡನ್ನು ಕೊಟ್ಟಿಗೆಗೆ ಹಾಕಿದ್ದೇವೆ. ಅಧಿಕಾರಿಗಳು ದುಡ್ಡು ನೀಡುತ್ತಿಲ್ಲ. ಈ ಬಾರಿ ಒಕ್ಕಲಿಗೆ ಏನು ಮಾಡುವುದು ಎಂದು ಶಂಕರ­ಲಿಂಗಯ್ಯ, ಗಂಗಣ್ಣ, ಗಾರೆ ಚಂದ್ರಯ್ಯ ಅಸಹಾಯಕತೆ ವ್ಯಕ್ತಪಡಿಸಿದರು.
ಜಾಬ್‌ ಕಾರ್ಡ್‌ಗೆ ಲಂಚ: ಆರಂಭದಲ್ಲಿ ಜಾಬ್‌ಕಾರ್ಡ್ ಉಚಿತವಾಗಿ ನೀಡುತ್ತಿದ್ದರು. ಮನೆ ಬಳಿಗೆ ಬಂದು ಭಾವಚಿತ್ರ ತೆಗೆಯುತ್ತಿದ್ದರು. ಅರ್ಜಿ ತುಂಬಿದ ತಕ್ಷಣ ಕಾರ್ಡ್ ನೀಡುತ್ತಿದ್ದರು.

ಆದರೆ ಈಗ ಕಾರ್ಡ್‌ ಕೊಡಲು ₨ 300ರಿಂದ ₨ 500 ಲಂಚ ಕೇಳುತ್ತಾರೆ. ಹಣ ಕೊಟ್ಟವರಿಗೆ ತಕ್ಷಣ ಕಾರ್ಡ್ ದೊರೆಯುತ್ತಿದೆ. ಕೊಡದಿದ್ದರೆ ಸಕಾಲಕ್ಕೆ ಹಾಕಿದ್ದೇವೆ ಬರುತ್ತದೆ ಹೋಗಿ ಎಂದು ವಿಳಂಬ ಮಾಡುತ್ತಿದ್ದಾರೆ ಎಂದು ಎರೆಹಳ್ಳಿ ಉಮೇಶ್, ಜಯಣ್ಣ, ಸಿದ್ದಲಿಂಗಪ್ಪ, ಎ.ಎಸ್.­ಕಾಂತರಾಜು, ನಟರಾಜ್ ದೂರಿದರು.

ಪ್ಲಾನ್ ಅಪ್ರೂವಲ್, ಸೆಕ್ಷನ್ ಆಫೀಸರ್, ತಾಂತ್ರಿಕ ಸಹಾಯಕ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಹಿ... ಹೀಗೆ ಒಂದು ಕೊಟ್ಟಿಗೆ ನಿರ್ಮಾಣ ಕಾಮಗಾರಿಗೆ ₨ 5 ಸಾವಿರ ಲಂಚ ಪಡೆ­ಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆ ಕುರಿತು ಸ್ಪಷ್ಟನೆ ನೀಡಿದ ತಾ.ಪಂ. ಇಒ ಎಚ್.ಕೃಷ್ಣಾನಾಯ್ಕ, ಯೋಜನೆಗೆ ಹಣ ಬಿಡುಗಡೆಯಾಗದ ಕಾರಣ ತಾತ್ಕಾಲಿಕವಾಗಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ವಾರದ ಹಿಂದೆ ಕೇಂದ್ರ ನರೇಗಾ ನಿರ್ದೇಶಕ ಮಾಡ್ಗೀಲ್ ವೀಡಿಯೋ ಕಾನ್ಫರೆನ್ಸ್ ನಡೆಸಿ ಯೋಜನೆಯ ಸಾಮಗ್ರಿ ಹಣ ತಡೆ ಹಿಡಿಯಲು ನಿರ್ದೇಶನ ನೀಡಿದ್ದಾರೆ. ಕೂಲಿ ಬಾಬ್ತಿನ ₨ 11 ಸಾವಿರ ನೀಡಲು ಅಭ್ಯಂತರವಿಲ್ಲ. ಚುನಾವಣಾ ನೀತಿ ಸಂಹಿತೆಗೂ, ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.