ಹುಳಿಯಾರು: ಎತ್ತಿನಹೊಳೆ ನೀರಾವರಿ ಯೋಜನೆಗೆ ಮಂಜೂರಾತಿ ದೊರೆತಿದ್ದು, ಶೀಘ್ರವೇ ಶಂಕುಸ್ಥಾಪನೆ ನೆರವೇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಹೋಬಳಿಯ ಗೂಬೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಪ್ರಾಥಮಿಕ ಪಶು ಚಿಕಿತ್ಸಾ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಯೋಜನೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೆಚ್ಚಿನ ಪ್ರಯೋಜನ ದೊರೆಯಲಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯ ನಾಲೆ ಕಾಮಗಾರಿ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆಯುತ್ತಿದ್ದು, ತುಮಕೂರಿಗೂ ವಿಸ್ತರಿಸುವ ಯೋಜನೆಗೆ ಇನ್ನೊಂದು ತಿಂಗಳಲ್ಲಿ ಮಂಜೂರಾತಿ ದೊರಕಿಸಿ ಕೊಡುವ ಭರವಸೆ ನೀಡಿದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಸುವರ್ಣ ಗ್ರಾಮ, ನಮ್ಮ ಊರು, ನಮ್ಮ ರಸ್ತೆ ಯೋಜನೆಗಳು ಅಭಿವೃದ್ಧಿಗೆ ಪೂರಕವಾಗಿದ್ದು, ಅವುಗಳನ್ನು ಮತ್ತೆ ಅನುಷ್ಠಾನಗೊಳಿಸುವಂತೆ ಸಚಿವರನ್ನು ಒತ್ತಾಯಿಸಿದರು. ತಾ.ಪಂ.ಅಧ್ಯಕ್ಷ ಕೆಂಕೆರೆ ನವೀನ್, ಜಿ.ಪಂ.ಉಪಾಧ್ಯಕ್ಷೆ ಜಾನಮ್ಮ, ಸದಸ್ಯರಾದ ಲೋಹಿತಾಬಾಯಿ, ಮಂಜುಳಾ, ತಹಶೀಲ್ದಾರ್ ಕಾಮಾಕ್ಷಮ್ಮ, ತಾ.ಪಂ.ಸದಸ್ಯರಾದ ಚೇತನಾ, ಲತಾ, ಗ್ರಾ.ಪಂ. ಅಧ್ಯಕ್ಷೆ ಕರಿಬಸಮ್ಮ, ಉಪಾಧ್ಯಕ್ಷ ತಿಮ್ಮರಾಯಪ್ಪ, ಸದಸ್ಯೆ ಉಷಾ, ಮುಖಂಡರಾದ ಸೀಮೆಎಣ್ಣೆ ಕೃಷ್ಣಯ್ಯ, ಜಿ.ಎಸ್.ಕೃಷ್ಣಮೂರ್ತಿ ಮತ್ತಿತರಿದ್ದರು.
ಆಸ್ಪತ್ರೆ ಸ್ಥಳ ದಾನಿಗಳಾದ ತಿಮ್ಮಾಭೋವಿ ಅವರ ಮೊಮ್ಮಗ ರವಿಶಂಕರ್ ಅವರನ್ನು ಸನ್ಮಾನಿಸಲಾಯಿತು.
₨ 37 ಕೋಟಿ ಪರಿಹಾರ
ಚಿಕ್ಕನಾಯಕನಹಳ್ಳಿ: ರಾಜ್ಯದಲ್ಲಿ 15ಸಾವಿರ ರಾಸುಗಳು ಕಾಲುಬಾಯಿ ಜ್ವರಕ್ಕೆ ತುತ್ತಾಗಿದ್ದು, ₨ 37 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಪಶುಸಂಗೋಪನಾ ಹಾಗೂ ಕಾನೂನು ಮತ್ತು ಸಂಸದಿಯ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿ ಶುಕ್ರವಾರ ಪಶುಚಿಕಿತ್ಸಾಲಯದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ನೂರು ಹೊಸ ಪಶು ಆಸ್ಪತ್ರೆಗೆ, ನೂರು ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಉದ್ದೇಶದಿಂದ ₨135ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು.
ನಾಲೆ ಆಧುನೀಕರಣ
ಗುಬ್ಬಿ:ಹೇಮಾವತಿ ನಾಲೆ ಆಧುನೀಕರಣಗೊಂಡರೆ ಮಾತ್ರ ಜಿಲ್ಲೆಗೆ ಹೆಚ್ಚು ನೀರು ಹರಿದು ಬರಲಿದೆ ಎಂದು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ತಾಲ್ಲೂಕಿನ ಹೊಸಕೆರೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶುಕ್ರವಾರ ನಡೆದ ಕೃಷಿ ಉತ್ಸವದಲ್ಲಿ ಮಾತನಾಡಿ, ಹೇಮಾವತಿ ಮುಖ್ಯ ನಾಲೆ ಅಂಚು ಕುಸಿದಿದೆ. ಸರ್ಕಾರ ನಾಲೆ ದುರಸ್ತಿಗೆ ₨ 850 ಕೋಟಿ ಮೀಸಲಿರಿಸಿದೆ. ನಾಲೆ ಆಧುನೀಕರಣಗೊಂಡರೆ ಜಿಲ್ಲೆಯ ಇನ್ನಿತರ ಭಾಗಕ್ಕೂ ನೀರು ಹರಿಸಬಹುದು ಎಂದರು.
ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ ಹೇಮಾವತಿ ನೀರು ಹರಿಯುವ ಹೋಬಳಿಗಳಲ್ಲೂ ಅಂತರ್ಜಲ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಶಾಸಕ ಎಂ.ಆರ್.ಹುಲಿನಾಯ್ಕರ್, ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪಿ.ಗಂಗಾಧರ್ರೈ, ತಾಲ್ಲೂಕು ಯೋಜನಾಧಿಕಾರಿ ಪ್ರವೀಣ್ಕುಮಾರ್, ಜಿ.ಪಂ.ಸದಸ್ಯ ಪಿ.ಬಿ.ಚಂದ್ರಶೇಖರಬಾಬು, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ನಿರ್ದೇಶಕ ಜಿ.ಚಂದ್ರಶೇಖರ್, ತಾ.ಪಂ.ಅಧ್ಯಕ್ಷ ಕೆ.ಎನ್.ಬಾಲಕೃಷ್ಣ, ಉಪಾಧ್ಯಕ್ಷೆ ಚಿಕ್ಕಮ್ಮ, ಸದಸ್ಯರಾದ ಗರಿಕಡ್ಡಿ ಶಿವಣ್ಣ, ದಯಾನಂದ್, ಗ್ರಾ.ಪಂ.ಅಧ್ಯಕ್ಷರಾದ ಶಾಂತಮ್ಮ, ಕಲಾವತಿ, ಮುಖಂಡರಾದ ಗುರುರೇಣುಕಾರಾಧ್ಯ, ದಿಲೀಪ್, ಶಿವಲಿಂಗಯ್ಯ, ಹೊಸಕೆರೆ ಮೂರ್ತಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.