ಶಿರಾ: ‘ಜನರು ಮೈಸೂರು ರಾಜರ ಬಗ್ಗೆ ಇಟ್ಟಿರುವ ಗೌರವ ಅಮೂಲ್ಯವಾದದ್ದು’ ಎಂದು ಮೈಸೂರಿನ ರಾಜ ವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು. ನಗರದ ಐತಿಹಾಸಿಕ ಪ್ರಸಿದ್ಧ ಅಂಬಾಭವಾನಿ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
‘1847ರಲ್ಲಿ ಅಂಬಾಭವಾನಿ ದೇವಾಲಯ ನಿರ್ಮಾಣಕ್ಕಾಗಿ ಮೈಸೂರು ಮಹಾರಾಜರು ಜಮೀನು ನೀಡಿದ್ದು, ಇಂದು ದೇವಿಯ ಕರೆಯ ಮೇರೆಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಿರುವುದು ಸಂತೋಷದ ವಿಷಯವಾಗಿದೆ. ಇಲ್ಲಿ ಜನರು ನೀಡುತ್ತಿರುವ ಗೌರವ ಸಂತೋಷ ತಂದಿದೆ’ ಎಂದರು.
ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ‘ಹಳೇ ಮೈಸೂರು ಭಾಗದಲ್ಲಿ ಈಗಲೂ ಮೈಸೂರು ಮಹಾರಾಜರು ದೈವ ಸ್ವರೂಪಿಗಳು ನಮ್ಮ ಭಾಗದ ದೇವರು ಎನ್ನುವ ಭಾವನೆ ಜನರಯಲ್ಲಿದೆ. ಆದ್ದರಿಂದ ಈ ಭಾಗದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜನರ ನಂಬಿಕೆಗೆ ಗೌರವ ಮೂಡಿಸುವ ಕೆಲಸ ಮಾಡಬೇಕು ಎಂದರು. ಯದುವೀರ ಕೃಷ್ಣದತ್ತ ಚಾಮರಾಜ ಓಡೆಯರ್ ಅವರಿಗೆ ಲಾಡರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಂತರ ವಿವಿಧ ಸಂಘಟನೆಗಳ ಮುಖಂಡರು ಸನ್ಮಾನಿಸಿದರು.
ಸಂಸದ ಬಿ.ಎನ್.ಚಂದ್ರಪ್ಪ, ನಗರಸಭೆ ಅಧ್ಯಕ್ಷ ಅಮಾನುಲ್ಲಾ ಖಾನ್, ಮಧುಗಿರಿ ಉಪವಿಭಾಗಾಧಿಕಾರಿ ವೆಂಕಟೇಶಯ್ಯ, ದೇವಾಲಯ ನಿರ್ವಹಣಾ ಸಮಿತಿ ಸದಸ್ಯರಾದ ಬಿ.ಎಸ.ವಿಜಯ್ ಕುಮಾರ್, ಆರ್.ಉದಯ್ ಕುಮಾರ್, ಲಾಡರ ಸಮಾಜದ ಹಿರಿಯ ಮುಖಂಡ ಎಸ್.ಎನ್.ಕೃಷ್ಣಯ್ಯ, ಬಿ.ವಿ.ವೆಂಕಟೇಶ್ ಲಾಡ್ ಸೇರಿದಂತೆ ನಗರದ ವಿವಿಧ ಗಣ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.