ADVERTISEMENT

ಕನ್ನಡವನ್ನು ಉಳಿಸುವ ಸಿಪಾಯಿಗಳಾಗಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 9:34 IST
Last Updated 16 ಅಕ್ಟೋಬರ್ 2017, 9:34 IST

ಗುಡಿಬಂಡೆ: ‘ಕನ್ನಡ ಭಾಷೆಗೆ ಸಾಹಿತ್ಯ ಪರಿಷತ್ತು ತವರು ಮನೆ ಇದ್ದಂತೆ. ತವರು ಮನೆಯಲ್ಲಿ ಮಗಳಿಗೆ ಸಿಗುವ ಗೌರವ, ಆದರ, ಸ್ಥಾನಮಾನ, ರಕ್ಷಣೆ ಎಲ್ಲವನ್ನೂ ಸಾಹಿತ್ಯ ಪರಿಷತ್ತು ಕನ್ನಡಕ್ಕೆ ನೀಡಿದೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೈವಾರ ಎನ್ ಶ್ರೀನಿವಾಸ್ ಹೇಳಿದರು.

ಪಟ್ಟಣದ ವಿನಾಯಕನಗರದ ಉದ್ಯಾನವನದಲ್ಲಿ ಭಾನುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಲಾಗಿದ್ದ ‘ವನಸಿರಿ ನುಡಿಸಿರಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಗುಡಿಬಂಡೆ ತಾಲ್ಲೂಕಿನ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳು, ಸಮ್ಮೇಳನಗಳು ಕನ್ನಡ ಭಾಷೆಯ ಹಿರಿಮೆಯನ್ನು ಸಾರುತ್ತವೆ. ಗುಡಿಬಂಡೆ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮನೆಯಂಗಳದಲಿ ನುಡಿಸಿರಿ, ಶಾಲೆಗೊಂದು ಕನ್ನಡದ ಹಬ್ಬ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಿರಂತರವಾಗಿ ನಡೆಸಿಕೊಂಡು ಬರುತ್ತಿವೆ. ಇಂತಹ ಕಾರ್ಯಕ್ರಮಗಳು ಇತರೆ ತಾಲ್ಲೂಕುಗಳಿಗೆ ಮಾದರಿಯಾಗಿದೆ’ ಎಂದರು.

ADVERTISEMENT

‘ನಮ್ಮ ಭಾಷೆಗೆ ತಾಯಿಯ ಸ್ಥಾನಮಾನ ನೀಡಿದ್ದೇವೆ. ಅಷ್ಟೇ ಗೌರವದಿಂದ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸದಾ ತೊಡಗಿಕೊಂಡಿರಬೇಕು. ಕನ್ನಡಿಗರು ಇತರ ಭಾಷೆಗಳನ್ನು ಗೌರವಿಸುತ್ತ ಕನ್ನಡವನ್ನು ಉಳಿಸಿ, ಬೆಳೆಸುವ ಸಿಪಾಯಿಗಳಂತೆ ಇರಬೇಕು’ ಎಂದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಅನುರಾಧ ಆನಂದ ಮಾತನಾಡಿ, ‘5ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗುಡಿಬಂಡೆ ಅಮಾನಿಬೈರಸಾಗರ ಕೆರೆಯ ವೇದಿಕೆಯ ಹೆಸರಿನಲ್ಲಿ ಕಾರ್ಯಕ್ರಮ ನಡೆಸಿದ್ದು ಕಾಕತಾಳಿಯವ, ಅದೃಷ್ಟವೋ ಇಂದು ಗುಡಿಬಂಡೆ ಕೆರೆ ತುಂಬಿ ಹರಿಯುತ್ತಿದೆ. ಗುಡಿಬಂಡೆ ಕೆರೆ ತುಂಬಿ ಹರಿಯಲು ಸಾಹಿತ್ಯ ಪರಿಷತ್ತಿನ ಪಾತ್ರವೂ ಇದೆ’ ಎಂದರು.

‘ಮನೆಯಂಗಳದಲಿ ನುಡಿಸಿರಿಯ ನಂತರ ವನಸಿರಿ ನುಡಿಸಿರಿ ಕಾರ್ಯಕ್ರಮವು ಮೊಟ್ಟ ಮೊದಲ ಬಾರಿಗೆ ಗುಡಿಬಂಡೆಯಲ್ಲಿ ನಡೆಯುತ್ತಿರುವುದು ಸಂತಸದ ವಿಷಯ. ವನಸಿರಿ ನುಡಿಸಿರಿ ಕಾರ್ಯಕ್ರಮದ ಮೂಲಕ ಪರಿಸರ ಹಾಗೂ ನಾಡಿನ ರೈತರ ಬಗ್ಗೆ ಕಾಳಜಿಯನ್ನು ವಹಿಸಿ ಅದರ ಜೊತೆಗೆ ಸಾಹಿತ್ಯವನ್ನು ಬೆಳೆಸಿದಂತಾಗುತ್ತದೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ಎನ್. ನಾರಾಯಣಸ್ವಾಮಿ, ಬಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ಎ.ಜಿ. ಸುಧಾಕರ್, ಗುಂಪುಮರದ ಆನಂದ್ ಮಾತನಾಡಿದರು. ವಿನಾಯಕನಗರದ ಉದ್ಯಾನವನ್ನು ಬೆಳೆಸಿದ ಗುಂಪುಮರದ ಆನಂದ್ ಹಾಗೂ ಮಹಬೂಬ್ ಸಾಬಿ ಅವರನ್ನು ಸನ್ಮಾನಿಸಿದರು. ಪರಿಸರ ಹಾಗೂ ಗುಡಿಬಂಡೆ ಕೆರೆಯ ಬಗ್ಗೆ ಕವಿಗಳು ಸ್ವರಚಿತ ಕವನಗಳನ್ನು ವಾಚಿಸಿದರು.

ಪಟ್ಟಣ ಪಂಚಾಯತಿ ಸದಸ್ಯ ರಾಜಣ್ಣ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಶ್ರೀನಿವಾಸ್ ನಾಯ್ಡು, ಕಾರ್ಯದರ್ಶಿ ವಾಹಿನಿ ಸುರೇಶ್, ಬಿ.ಮಂಜುನಾಥ, ವಿ.ಶ್ರೀರಾಮಪ್ಪ, ಖಚಾಂಚಿ ರಾಘವೇಂದ್ರ,  ಕವಿ ಗುಡಿಬಂಡೆ ರಫೀಕ್, ಪ್ರೆಸ್ ಸುಬ್ಬರಾಯಪ್ಪ, ಮಂಜುನಾಥ ಗಣಪತಿ ಹೆಗಡೆ, ದೂರವಾಣಿ ಗಂಗಾಧರ್, ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ವಿ ಆನಂದ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಯಾದವ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿನ್ನರಾಜಯ್ಯ, ರಾಮಾಂಜಿನಯ್ಯ, ವೆಂಕಟಾಚಲಪತಿ, ರಾಜಪ್ಪ, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.