ADVERTISEMENT

ಕಾಕಡ ಬೆಲೆ ಕುಸಿತ: ಬೆಳೆಗಾರ ಕಂಗಾಲು

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 10:40 IST
Last Updated 12 ಜನವರಿ 2012, 10:40 IST

ತಿಪಟೂರು: ತಾಲ್ಲೂಕಿನಲ್ಲಿ ಕಾಕಡ ಹೂ ಬೆಳೆಯುವ ಪ್ರಮಾಣ ಏರುತ್ತಿದೆ. ಆದರೆ ಈಗ ಬೆಲೆ ತೀವ್ರ ಕುಸಿದಿದ್ದು, ಮೊಗ್ಗು ಬಿಡಿಸದೆ ಕೈಬಿಟ್ಟಿರುವ ಹೂತೋಟಗಳಲ್ಲಿ ಬಿಳಿ ಚಾದರ ನಿರ್ಮಾಣವಾಗಿದೆ.
 
ತಾಲ್ಲೂಕಿನಲ್ಲಿ ಸುಮಾರು ಆರೇಳು ವರ್ಷಗಳಿಂದ ಕಾಕಡ ಬೆಳೆಯುವ ಉಮೇದು ವ್ಯಾಪಕವಾಗಿ ಹಬ್ಬಿ ಬೆಳೆಗಾರರ ಆರ್ಥಿಕ ಸುಧಾರಣೆಗೂ ಕಾರಣವಾಗಿದೆ.

ಸುತ್ತಮುತ್ತಲಿನ ಹಲವಾರು ಹಳ್ಳಿಗಳ ರೈತರನ್ನು ಕಾಕಡ ಕೈಹಿಡಿದ ಉದಾಹರಣೆಗಳಿವೆ. ಕಡಿಮೆ ಜಮೀನು ಹೊಂದಿರುವ ರೈತರು ಕೂಡ ಕೆರೆಕಟ್ಟೆಯಿಂದ, ಕೈಪಂಪಿನಿಂದ ನೀರು ಹೊತ್ತಾದರೂ ಕಾಕಡ ಬೆಳೆಸಿ ನಿತ್ಯ ಒಂದಿಷ್ಟು ಕಾಸು ಕಂಡುಕೊಳ್ಳತೊಡಗಿದ್ದರು.

ಗ್ರಾಮೀಣ ಕೂಲಿಕಾರ್ಮಿಕ ಮಹಿಳೆಯರಿಗೆ ಹಾಗೂ ಮನೆಮಂದಿಗೂ ಕಾಕಡ ಮೊಗ್ಗು ಬಿಡಿಸುವ ನಿತ್ಯ ಕೆಲಸ ಸಿಕ್ಕಿತ್ತು. ಎಕರೆಗಟ್ಟಲೆ ಗಿಡ ಬೆಳೆದವರೂ ಇದ್ದಾರೆ. ಬೇಡಿಕೆ ಇರುವುದರಿಂದ ಬೆಳಗ್ಗೆ ಚೀಲದಲ್ಲಿ ಕಾಕಡ ಹಿಡಿದು ನಗರಕ್ಕೆ ಬರುವ ನೂರಾರು ರೈತರನ್ನು ನಿತ್ಯ ಕಾಣಬಹುದು.

ಈಗ ಬೆಲೆ ಕುಸಿತದಿಂದಾಗಿ ರೈತರನ್ನು ಕಳವಳಕ್ಕೀಡು ಮಾಡಿದೆ. ಒಂದೆರಡು ವಾರದಿಂದ ಕೆ.ಜಿ. ಮೊಗ್ಗಿನ ಬೆಲೆ ರೂ. 25- 40 ಆಚೀಚೆ ಇದೆ. ಒಂದು ಕೆ.ಜಿ. ಮೊಗ್ಗು ಬಿಡಿಸಲು ಇದಕ್ಕಿಂತ ಹೆಚ್ಚು ಹಣ ಕೂಲಿ ರೂಪದಲ್ಲಿ ಖರ್ಚಾಗುವುದ ರಿಂದ ರೈತರಿಗೆ ನುಂಗಲಾರದ ತುತ್ತಾಗಿದೆ. ಮೊಗ್ಗು ಬಿಡಿಸದೆ ಬಿಟ್ಟರೆ ಕೀಟ ಆವರಿಸಿ ಗಿಡಗಳಿಗೆ ಧಕ್ಕೆಯಾಗುವ ಆತಂಕದಿಂದ ಕೆಲವರು ನಷ್ಟವಾದರೂ ಮೊಗ್ಗು ಬಿಡಿಸಿ ಮಾರುತ್ತಿದ್ದಾರೆ.

ಮುಂದಿನ ಬೆಳೆ ಮತ್ತು ಗಿಡದ ಕ್ಷೇಮದ ದೃಷ್ಟಿಯಿಂದ ಮೊಗ್ಗು ಬಿಡಿಸುವುದು ಅನಿವಾರ್ಯ ಕೂಡ. ಆದರೆ ಕಣಗಾಲದ ಈ ಸಂದರ್ಭದಲ್ಲಿ ಮೊಗ್ಗು ಬಿಡಿಸಲು ಜನ ಸಿಗುವುದೂ ಕಷ್ಟ. ಹಾಗಾಗಿ ಎಷ್ಟೋ ರೈತರು ಮೊಗ್ಗು ಬಿಡಿಸು ವುದನ್ನು ಕೈಬಿಟ್ಟಿದ್ದಾರೆ.
 
ಮುಂದಿನ ದಿನಗಳಲ್ಲಿ ಮೊಗ್ಗಿನ ಬೆಲೆ ಏರುವ ಭರವಸೆಯಿಂದ ಕೆಲವರು ನಷ್ಟದಲ್ಲೇ ಮೊಗ್ಗು ಬಿಡಿಸುವ ಜತೆಗೆ ಗಿಡಗಳ ಆರೋಗ್ಯ ಕಾಯ್ದುಕೊಳ್ಳುತ್ತಿ ದ್ದಾರೆ. ಸದ್ಯಕ್ಕಂತೂ ಕಾಕಡ ಪುಷ್ಟೋದ್ಯ ಮದ ಮೇಲೆ ಕರಿಮೋಡ ಕವಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.