ADVERTISEMENT

ಕುರಿಗಾಹಿ ಮೇಲೆ ಜೋಡಿ ಕರಡಿ ದಾಳಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 8:15 IST
Last Updated 2 ಜುಲೈ 2013, 8:15 IST

ಶಿರಾ: ರಾತ್ರಿ ನೆಂಟರ ಮನೆಯಲ್ಲಿ ಮಲಗಿದ್ದು ನಸುಕಿನಲ್ಲೇ ಕುರಿ ಮಂದೆಗೆ ಹಿಂದಿರುಗುತ್ತಿದ್ದ ಕುರಿಗಾಹಿ ಮೇಲೆ ಜೋಡಿ ಕರಡಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ತಾಲ್ಲೂಕಿನ ಬರಗೂರು ಕೆರೆಯಲ್ಲಿ ಸೋಮವಾರ ನಡೆದಿದೆ.

ತಾಲ್ಲೂಕಿನ ಗೌಡಗೆರೆ ಹೋಬಳಿ ಬಡಮಂಗನಹಟ್ಟಿಯ ನಾಗೇಂದ್ರ (28) ಕೆಲ ದಿನಗಳ ಹಿಂದೆ ಬರಗೂರು ಸಮೀಪದ ರಂಗಾಪುರದ ಬಳಿಗೆ ಕುರಿ ಮಂದೆ ಕರೆದುಕೊಂಡು ಹೋಗಿದ್ದರು.

ಅಲ್ಲಿಗೆ ಸಮೀಪದ ಕದಿರೇಹಳ್ಳಿಯಲ್ಲಿ ನಾಗೇಂದ್ರನ ನೆಂಟರಿದ್ದರು. ಭಾನುವಾರ ಕುರಿಗಳನ್ನು ಮೇಯಿಸಿ ಮಂದೆಗೆ ಕೂಡಿದ ನಾಗೇಂದ್ರ ನೆಂಟರ ಮನೆಗೆಂದು ರಾತ್ರಿ ಹೋಗಿದ್ದಾರೆ. ಅಲ್ಲಿಯೇ ತಂಗಿದ್ದು ಸೋಮವಾರ ನಸುಕಿನಲ್ಲೇ ಎದ್ದು ಕುರಿ ಮಂದೆ ಕಡೆಗೆ ಹೆಜ್ಜೆ ಹಾಕಿದ್ದಾರೆ.

ಬರಗೂರು ಕೆರೆ ಮೂಲಕ ಹಾದು ಬರುತ್ತಿದ್ದ ವೇಳೆ ಸೀಮೆ ಜಾಲಿಯಲ್ಲಿ ಅಡಗಿದ್ದ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿ ಮೈ-ಕೈ, ಬೆನ್ನು, ಎದೆಗೆ ಪರಚಿವೆ. ಇದರಿಂದ ತೀವ್ರ ರಕ್ತ ಸ್ರಾವವಾಗಿದೆ. ಗಾಬರಿಯಿಂದ ಕಿರುಚಿಕೊಂಡು ಅಲ್ಲಿಂದ ಓಟ ಕಿತ್ತಿದ್ದಾನೆ. ಆಗ ಎರಡು ಕರಡಿಗಳೂ ಹಿಮ್ಮೆಟ್ಟಿವೆ. ಇದರಿಂದ ನಾಗೇಂದ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ತುಮಕೂರು ಆಸ್ಪತ್ರೆಗೆ ಸಾಗಿಸಲಾಗಿದ್ದು, ತಾಲ್ಲೂಕು ವಲಯ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.