ADVERTISEMENT

ಕೆಂಡದಲ್ಲಿ ಬಿದ್ದ ಪಲ್ಲಕ್ಕಿ

​ಪ್ರಜಾವಾಣಿ ವಾರ್ತೆ
Published 7 ಮೇ 2014, 10:26 IST
Last Updated 7 ಮೇ 2014, 10:26 IST
ಚಿಕ್ಕನಾಯಕನಹಳ್ಳಿ ತಾಲ್ಲೂಕು ದಬ್ಬೇಗಟ್ಟ ಮರುಳಸಿದ್ದೇಶ್ವರ ಸ್ವಾಮಿ ಅಗ್ನಿಕೊಂಡ ಹಾಯುವಾಗ ಮುಗ್ಗರಿಸಿದ ಪರಿಣಾಮ ಕೆಂಡದಲ್ಲಿ ಬಿತ್ತು.
ಚಿಕ್ಕನಾಯಕನಹಳ್ಳಿ ತಾಲ್ಲೂಕು ದಬ್ಬೇಗಟ್ಟ ಮರುಳಸಿದ್ದೇಶ್ವರ ಸ್ವಾಮಿ ಅಗ್ನಿಕೊಂಡ ಹಾಯುವಾಗ ಮುಗ್ಗರಿಸಿದ ಪರಿಣಾಮ ಕೆಂಡದಲ್ಲಿ ಬಿತ್ತು.   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ದಬ್ಬೇ­ಗಟ್ಟದಲ್ಲಿ ಅಗ್ನಿಕೊಂಡ ಹಾಯು­ವಾಗ ದೇವರನ್ನು ಹೊತ್ತಿದ್ದವರು ಮುಗ್ಗರಿಸಿದ ಪರಿಣಾಮ ಕೆಂಡದಲ್ಲಿ ಬಿದ್ದು, ದೇವರನ್ನು ನಿಗಿನಿಗಿ ಕೆಂಡದಲ್ಲೇ ಬಿಟ್ಟು ಓಡಿದ ಘಟನೆ ಮಂಗಳವಾರ ನಡೆದಿದೆ.

ಗಂಗಾಸ್ನಾನ ಮುಗಿಸಿ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ದೇವರನ್ನು ಕರೆತರಲಾ­ಯಿತು. ಮಧ್ಯಾಹ್ನ 3ಗಂಟೆಗೆ ಭಕ್ತರ ಹರ್ಷೋದ್ಗಾರದೊಂದಿಗೆ ಅಗ್ನಿಕೊಂಡ ಹಾಯುವ ಪ್ರಕ್ರಿಯೆಗೆ ಚಾಲನೆ ನಿಡಲಾಯಿತು.

ಕೆಂಡ ಹಾಯುವಾಗ ಮುಂಬದಿ­ಯಲ್ಲಿ ಪಲ್ಲಕ್ಕಿ ಹೊತ್ತಿದ್ದ ಸೋಮ­ಶೇಖರ್ ಎಂಬಾತ ಮುಗ್ಗರಿಸಿ ಕೆಂಡದಲ್ಲಿ ಬಿದ್ದರು. ತಕ್ಷಣ ಹಿಂಬದಿ­ಯಲ್ಲಿದ್ದ ಗೋವಿಂದರಾಜ್ ಕೂಡ ಆಯತಪ್ಪಿ ಬಿದ್ದರು. ಇಬ್ಬರೂ ದೇವರನ್ನು ಅಗ್ನಿ ಕೊಂಡದಲ್ಲೇ ಬಿಟ್ಟು ಹೊರಗೆ ಓಡಿದರು. ಈ ಘಟನೆಯಿಂದ ನೆರೆದಿದ್ದ ಭಕ್ತಸ್ತೋಮ ಕ್ಷಣ ಕಾಲ ದಂಗಾಯಿತು!

ದೇವರನ್ನು ಕೆಂಡದಲ್ಲೇ ಬಿಟ್ಟು ಓಡಿದ್ದರಿಂದ ಪಲ್ಲಕ್ಕಿ ಹೊತ್ತಿದ್ದವರು ಪ್ರಾಣಾಪಾಯದಿಂದ ಪಾರಾದರು. ನಂತರ ಭಕ್ತರು ಹೊರಗಿನಿಂದ ಪಲ್ಲಕ್ಕಿ ಸಮೇತ ದೇವರನ್ನು ಕೆಂಡದಿಂದ ಹೊರಗೆ ಎಳೆದುಕೊಂಡರು. ಇಬ್ಬರಿಗೂ ಗಂಭೀರ ಸುಟ್ಟಗಾಯ­ಗಳಾಗಿದ್ದು, ತಕ್ಷಣ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎರಡು ಶತಮಾನದ ಇತಿಹಾಸ ಹೊಂದಿರುವ ದಬ್ಬೇಘಟ್ಟ ಮರುಳ­ಸಿದ್ದೇಶ್ವರ ಜಾತ್ರೆ ತಾಲ್ಲೂಕಿನ ಪ್ರಸಿದ್ದ ಜಾತ್ರೆಗಳಲ್ಲಿ ಒಂದು. ಅದರಲ್ಲೂ ಜಾತ್ರೆಯ ಪ್ರಮುಖ ಘಟ್ಟವಾದ ದೇವರು ಕೆಂಡ ಹಾಯುವುದನ್ನು ನೋಡಲು ಜನ ಕಿಕ್ಕಿರಿದು ಸೇರುತ್ತಾರೆ. ಈ ಬಾರಿ ಆರು ಟ್ರ್ಯಾಕ್ಟರ್ ಲೋಡು ಒಣ ಸೌದೆ ಸುಟ್ಟು 15 ಚದರಡಿ ವಿಸ್ತೀರ್ಣದಲ್ಲಿ ಕೆಂಡ ಹರಡಲಾಗಿತ್ತು. ಇದೇ ಮೊದಲ ಬಾರಿಗೆ ಈ ಅವಘಡ ಸಂಭವಿಸಿದ್ದರಿಂದ ಭಕ್ತರು ಕಳವಳಕ್ಕೀಡಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.