ADVERTISEMENT

ಗುಬ್ಬಿವೀರಣ್ಣ ರಂಗಮಂದಿರ ಆಧುನೀಕರಣ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 6:40 IST
Last Updated 3 ಮಾರ್ಚ್ 2011, 6:40 IST

ತುಮಕೂರು: ನಗರದ ಏಕೈಕ ರಂಗಚಟುವಟಿಕೆ ಕೇಂದ್ರ ಗುಬ್ಬಿ ವೀರಣ್ಣ ಕಲಾಕ್ಷೇತ್ರವನ್ನು ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ   ನವೀಕರಣ ಮಾಡಲಾಗುತ್ತಿದೆ. ರಂಗಮಂದಿರದ ಮೇಲ್ಛಾವಣಿ ಬದಲಾವಣೆ ಸೇರಿದಂತೆ ವಿವಿಧ ಕಾಮಗಾರಿ ಪ್ರಗತಿಯಲ್ಲಿದೆ.ರಂಗಮಂದಿರವನ್ನು ಆಧುನಿಕವಾಗಿ         ನವೀಕರಣ ಮಾಡಬೇಕು ಎಂಬ ರಂಗಾಸಕ್ತರ ಬೇಡಿಕೆಗೆ ಸರ್ಕಾರ  ಸ್ಪಂದಿಸಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ರೂ. 45 ಲಕ್ಷ     ಅನುದಾನ ನೀಡಿದೆ. ಕನ್ನಡ ಮತ್ತು ಅಭಿವೃದ್ಧಿ   ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಮ್ಮ ಶಾಸಕರ ನಿಧಿಯಿಂದ ರೂ. 5 ಲಕ್ಷ     ಅನುದಾನ ನೀಡಿದ್ದಾರೆ. ಅಲ್ಲದೆ ರಂಗಮಂದಿರದ ಬಾಡಿಗೆ ಹಣ ಸುಮಾರು ರೂ. 9 ಲಕ್ಷ ಸೇರಿದಂತೆ ನವೀಕರಣಕ್ಕೆ 60 ಲಕ್ಷ ವೆಚ್ಚ     ಮಾಡಲಾಗುತ್ತಿದೆ.

ರಂಗಮಂದಿರದ ಮೇಲ್ಛಾವಣಿಯನ್ನು ಸಂಪೂರ್ಣ      ಬದಲಾವಣೆ ಮಾಡಲಾಗುತ್ತಿದೆ. ಹಳೆಯ ಕುರ್ಚಿಗಳನ್ನು     ತೆಗೆದುಹಾಕಿ ಆಧುನಿಕ ಕುರ್ಚಿಗಳನ್ನು ಹಾಕಲಾಗುತ್ತದೆ. ಮಂದಿರದ ಗೋಡೆಗಳಿಗೆ ಸುಣ್ಣ- ಬಣ್ಣ ಬಳಿಯಲಾಗುತ್ತಿದೆ. ನೆಲಹಾಸು ಬದಲಾವಣೆ, ಆವರಣದಲ್ಲಿ ಯುಜಿಡಿ ಸೌಲಭ್ಯ, ನೂತನ ಶೌಚಾಲಯ ನಿರ್ಮಾಣ, ಎಲೆಕ್ಟ್ರಿಕ್ ವೈರ್‌ಗಳ ಸಂಪೂರ್ಣ ಬದಲಾವಣೆ ಸೇರಿದಂತೆ ರಂಗಮಂದಿರಕ್ಕೆ ಆಧುನಿಕ ಟಚ್ ನೀಡಲಾಗುತ್ತಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ರಂಗಮಂದಿರ  ವೇದಿಕೆಯನ್ನು  ನವೀಕರಣ   ಮಾಡಲಾಗುತ್ತದೆ. ಹಿಂಭಾಗದ ಪರದೆ (ಸ್ಕ್ರೀನ್) ಬದಲಾವಣೆ ಮಾಡಲಾಗುವುದು. ಮಂದಿರದ ಮುಂಭಾಗ ಗುಬ್ಬಿ ವೀರಣ್ಣ ಅವರ ಎದೆಮಟ್ಟದ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುತ್ತಿದೆ.ಈಗಾಗಲೇ ಶೇ. 60ರಷ್ಟು ಕಾಮಗಾರಿ   ಮುಗಿದಿದ್ದು, ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಕಾಮಗಾರಿಗೆ ಹಣದ ಸಮಸ್ಯೆ ಇಲ್ಲ. ಮೇನಲ್ಲಿ    ರಂಗಮಂದಿರವನ್ನು ರಂಗಚಟುವಟಿಕೆಗೆ  ಸಮರ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ   ಡಾ.ಸಿ.ಸೋಮಶೇಖರ್ ಪ್ರಜಾವಾಣಿಗೆ ತಿಳಿಸಿದ್ದಾರೆ.

ತಿಂಗಳು ಪೂರ ಸಾಂಸ್ಕೃತಿಕ ಸಿಂಚನ
ಗುಬ್ಬಿ ವೀರಣ್ಣ ರಂಗಮಂದಿರವನ್ನು ಇಡೀ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಸಮರ್ಪಣೆ  ಮಾಡಲಾಗುವುದು. ಉದ್ಘಾಟನೆ ದಿನದಿಂದ 30 ದಿನಗಳ ಕಾಲ ಪ್ರತಿದಿನ ರಂಗೋತ್ಸವ  ನಡೆಯಲಿದೆ. ಪ್ರತಿದಿನ ಸಂಜೆ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳ ಪ್ರದರ್ಶನ ನಡೆಯಲಿದೆ. ಪ್ರತಿ ತಾಲ್ಲೂಕಿನ ಸ್ಥಳೀಯ ಕಲಾವಿದರಿಗೆ       ಅವಕಾಶ ನೀಡಲಾಗುವುದು. ಅಲ್ಲದೆ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ   ಕಾರ್ಯಕ್ರಮ ನಡೆಯಲಿದೆ ಎಂದು ಅವರು     ತಿಳಿಸಿದರು.

ಗುಬ್ಬಿಯಲ್ಲಿ ನೂತನ ರಂಗಮಂದಿರ:    
  ರಂಗದಿಗ್ಗಜ ವೀರಣ್ಣ ಅವರ ತವರು ಗುಬ್ಬಿಯಲ್ಲಿ ಸುಮಾರು ರೂ. 1.5 ಕೋಟಿ ವೆಚ್ಚದಲ್ಲಿ ನೂತನ ರಂಗಮಂದಿರ ನಿರ್ಮಾಣಕ್ಕೆ ವೇದಿಕೆ         ಸಿದ್ಧವಾಗಿದೆ. ಈಗಾಗಲೇ ಗುಬ್ಬಿ ಪುರಸಭೆ ರೂ. 13 ಲಕ್ಷ ನೀಡಿದೆ. ಮತ್ತೆ ಈ ವರ್ಷ ಮತ್ತಷ್ಟು ಹಣ ನೀಡಲಿದೆ. ರಾಜ್ಯ ಸಭೆ ಸದಸ್ಯೆ ಜಯಶ್ರೀ ಸಂಸದರ    ಅನುದಾನದಿಂದ ರೂ. 25 ಲಕ್ಷ ನೀಡಲಿದ್ದಾರೆ. ಮತ್ತೆ ಶಾಸಕರು, ಸಂಸದರ  ನಿಧಿಯಿಂದ ರೂ. 50 ಸಂಗ್ರಹಿಸಲಾಗುತ್ತದೆ. ಉಳಿದ  ಹಣವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.ಈಗಾಗಲೇ ಗುಬ್ಬಿಯಲ್ಲಿ ಶೆಡ್‌ನಂತಹ       ಹಳೆಯ ರಂಗಮಂದಿರವಿದೆ. ಅದನ್ನು ಒಡೆದು ಹಾಕಿ ನೂತನ ರಂಗಮಂದಿರ                            ನಿರ್ಮಿಸಲಾಗುವುದು. ಶೀಘ್ರ ಟೆಂಡರ್          ಕರೆಯಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.