ADVERTISEMENT

ಗೃಹ ಪ್ರವೇಶದ ಮೂಲಕ ರಾಜ್ಯೋತ್ಸವ ಆಚರಣೆ

ಕೊರಟಗೆರೆಯಲ್ಲೊಂದು ವಿಶೇಷ ಕೆಲಸ, ರಾಜ್ಯೋತ್ಸವ ಹಣದಲ್ಲಿ ವೃದ್ಧೆಗೆ ಮನೆ ನಿರ್ಮಿಸಿಕೊಟ್ಟ ಫ್ರೆಂಡ್ಸ್‌ ಗ್ರೂಪ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 6:04 IST
Last Updated 30 ನವೆಂಬರ್ 2017, 6:04 IST
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊರಟಗೆರೆ ಫ್ರೆಂಡ್ಸ್‌ ಗ್ರೂಪ್‌ ನಿರ್ಮಿಸಿದ `ಕನ್ನಡದ ಸೂರು’ ಮನೆಯ ಕೀಲಿಯನ್ನು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಲಕ್ಷಮ್ಮ ಅವರಿಗೆ ಹಸ್ತಾಂತರಿಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕೊರಟಗೆರೆ ಫ್ರೆಂಡ್ಸ್‌ ಗ್ರೂಪ್‌ ನಿರ್ಮಿಸಿದ `ಕನ್ನಡದ ಸೂರು’ ಮನೆಯ ಕೀಲಿಯನ್ನು ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಲಕ್ಷಮ್ಮ ಅವರಿಗೆ ಹಸ್ತಾಂತರಿಸಿದರು.   

ಕೊರಟಗೆರೆ: ರಾಜ್ಯೋತ್ಸವ ಹಾಗೂ ಇನ್ನಿತರೆ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ದುಂದು ವೆಚ್ಚ ಮಾಡಿ ಆಚರಿಸುವ ಇಂದಿನ ದಿನಗಳಲ್ಲಿ ಆಚರಣೆಗೆ ಅರ್ಥ ನೀಡುವ ನಿಟ್ಟಿನಲ್ಲಿ ಇಲ್ಲಿನ ಫ್ರೆಂಡ್ಸ್ ಗ್ರೂಪ್‌ ನಿರ್ಗತಿಕ ವೃದ್ಧೆಗೆ ಮನೆ ನಿರ್ಮಿಸಿಕೊಟ್ಟು ಅದರ ಗೃಹ ಪ್ರವೇಶವನ್ನು ರಾಜ್ಯೋತ್ಸವನ್ನು ವಿಶಿಷ್ಟವಾಗಿ ಆಚರಿಸಿದೆ.

ಪಟ್ಟಣದ ಗಿರಿನಗರದಲ್ಲಿ ಲಕ್ಷ್ಮಮ್ಮ ಗುಡಿಸಲಿನಲ್ಲಿ ವಾಸವಿದ್ದರು. ಈಚೆಗೆ ಸುರಿದ ಬಾರೀ ಮಳೆಯಿಂದಾಗಿ ಇಡೀ ಗುಡಿಸಲು ಜಲಾವೃತವಾಗಿ ಹಾಳಾಗಿತ್ತು. ಇದ್ದ ಪುಟ್ಟ ಗುಡಿಸಲು ಕಳೆದುಕೊಂಡ ಲಕ್ಷ್ಮಮ್ಮ ತನ್ನ ಮಗಳೊಂದಿಗೆ ಬೀದಿಪಾಲಾದರು. ಇದನ್ನು ಗಮನಿಸಿದ ಗ್ರೂಪ್‌ ಸದಸ್ಯರೂ  ಸ್ವಂತ ಹಣ ಖರ್ಚು ಮಾಡಿ ಮನೆ ನಿರ್ಮಾಣಕ್ಕೆ ಕೈ ಹಾಕಿದರು. ರಾಜ್ಯೋತ್ಸವದ ಹೊತ್ತಿಗೆ ಮನೆ ನಿರ್ಮಿಸಿ ಕೊಡಬೇಕೆಂದು ಪಣ ತೊಟ್ಟರು. ಅದರಂತೆ ಮನೆ ನೀಡಿದ್ದಾರೆ.

ಇಡೀ ಮನೆಗೆ ಕನ್ನಡ ಭಾವುಟದ ಬಣ್ಣ ಬಳಿದು `ಕನ್ನಡದ ಸೂರು' ಎಂದು ನಾಮಕರಣ ಮಾಡಿ ಬುಧವಾರ ಗೃಹ ಪ್ರವೇಶನ್ನೂ ಮಾಡಿ ಆ ಮೂಲಕ ರಾಜ್ಯೋತ್ಸವ ಆಚರಣೆ ಮಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಲಕ್ಷ್ಮಮ್ಮ ಅವರಿಗೆ ತಿಂಗಳಿಗೆ ₹ 1 ಸಾವಿರ ಮಾಸಾಶನ ನೀಡುವ ಭರವಸೆ ನೀಡಿದೆ. ನಿರ್ಮಾಣವಾದ ಮನೆಗೆ ಸರ್ಕಾರದ ವತಿಯಿಂದ ಹಕ್ಕು ಪತ್ರವನ್ನು ಸಹ ನೀಡಲಾಯಿತು.

ADVERTISEMENT

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಸಕ ಪಿ.ಆರ್.ಸುಧಾಕರ್‌ ಲಾಲ್‌ ಸೇರಿದಂತೆ ಗಣ್ಯರು ಗೃಹಪ್ರವೇಶಕ್ಕೆ ಸಾಕ್ಷಿಯಾದರು.

ಪಟ್ಟಣದಲ್ಲಿ ಬಹಳ ವರ್ಷಗಳಿಂದ ಫ್ರೆಂಡ್ಸ್ ಗ್ರೂಪ್‌ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದೆ. ಯಾರೇ ಕಷ್ಟ ಎಂದರೂ ನೆರವಿನ ಹಸ್ತ ಚಾಚುತ್ತದೆ.

ಫ್ರೆಂಡ್ಸ್ ಗ್ರೂಪ್‌ನ ಸಾಮಾಜಿಕ ಸೇವೆಗಳನ್ನು ಹೇಳಲು ಹೊರಟರೆ ಒಂದೆ, ಎರಡೇ. ಉಚಿತ ಆಂಬುಲೆನ್ಸ್‌ ಸೇವೆಗೆ ಬಿಟ್ಟಿದೆ.  ಬಡ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ಒದಗಿಸಿಕೊಡಲಾಗುತ್ತಿದೆ.

ಸಮಾಜ ಸೇವೆಗೆ ಸದಾ ಮುಂದಾಳು ಗ್ರೂಪ್‌ನ ಅಧ್ಯಕ್ಷ ರವಿಕುಮಾರ್ ಹಾಗೂ ಮಲ್ಲಣ್ಣ. ದೇವಾಲಯಗಳಲ್ಲಿ ಪ್ರಸಾದ ವಿನಿಯೋಗ ಮಾಡುವುದು. ಸ್ವಚ್ಛತೆ ಕಾಪಾಡುವ ಕೆಲಸವನ್ನು ಮಾಡುತ್ತಾರೆ. ಗ್ರೂಪ್‌ ಸದಸ್ಯರು ಎಂದೂ ಪ್ರಚಾರ ಬಯಸಿದವರಲ್ಲ. ಇಂದಿಗೂ ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆ ಹತ್ತುವುದಾಗಲಿ ಅಥವಾ ಸನ್ಮಾನ ಪಡೆಯುವುದಾಗಲಿ ಮಾಡುತ್ತಿಲ್ಲ.

ಎಲ್ಲರ ಸಹಕಾರದಿಂದ ಸೂರು ನಿರ್ಮಾಣ
ರಸ್ತೆಯಲ್ಲಿ ಓಡಾಡುವ ಸಂದರ್ಭದಲ್ಲಿ ವೃದ್ಧೆ ಮಳೆಯಲ್ಲಿ ನೆನೆಯುತ್ತಾ ಕುಳಿತಿದ್ದ ದೃಶ್ಯ ಕಂಡು ವಿಚಾರ ಮಾಡಲಾಗಿ ಮನೆ ಇಲ್ಲ ಎಂಬ ಅಂಶ ಗಮನಕ್ಕೆ ಬಂತು. ನಾವೆಲ್ಲ ಸ್ನೇಹಿತರು ಸೇರಿ ಅಜ್ಜಿಗೊಂದು ಮನೆ ಕಟ್ಟಿಕೊಡುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮ ಅರ್ಥಗರ್ಭಿತವಾಗಿ ಆಚರಿಸುವ ತೀರ್ಮಾನಕ್ಕೆ ಬಂದೆವು. ಕೆಲಸ ಪ್ರಾರಂಭಿಸಿದ ನಂತರ ಸ್ನೇಹಿತರು ಒಂದಲ್ಲ ಒಂದು ರೀತಿ ಸಹಾಯ ಮಾಡಿದ ಕಾರಣ ಅಜ್ಜಿಗೊಂದು ವ್ಯವಸ್ಥಿತವಾದ ಮನೆ ನಿರ್ಮಿಸಲು ಸಾಧ್ಯವಾಯಿತು.
–ರವಿಕುಮಾರ್, ಫ್ರೆಂಡ್ಸ್ ಗ್ರೂಪ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.