ಜಿಲ್ಲೆಯ ಇತಿಹಾಸದಲ್ಲಿ ಎಲ್ಲೂ ಕೂಡ ಕುರಂಗರಾಜನ ಪ್ರಸ್ತಾಪ ಇಲ್ಲ. ಶಾಸನ, ದಾಖಲೆ ಲಭ್ಯವಾಗಿಲ್ಲ. ಹೀಗಾಗಿ ಕುರಂಕೋಟೆಯ ಪಾಳೇಗಾರ ಕುರಂಗ ಎಂದು ಹೇಳಲು ಸಾಧ್ಯವಿಲ್ಲ. ಆತ ದಲಿತ ಎಂಬುದಕ್ಕೂ ದಾಖಲೆ ಇಲ್ಲ ಎನ್ನುತ್ತಾರೆ ಇತಿಹಾಸ ಸಂಶೋಧಕ ಡಾ.ಡಿ.ಎನ್.ಯೋಗೀಶ್.
ಕೊರಟಗೆರೆಯನ್ನು ಒಕ್ಕಲಿಗರು, ಪಾವಗಡವನ್ನು ಗೊಲ್ಲರು, ನಿಡುಗಲ್ಲು ಬೆಟ್ಟವನ್ನು ಬೇಡರು (ನಾಯಕರು), ಮಧುಗಿರಿ ಮತ್ತು ಹಾಗಲವಾಡಿ ಸಂಸ್ಥಾನವನ್ನು ಲಿಂಗಾಯತರು ಆಳ್ವಿಕೆ ನಡೆಸಿದ್ದರು. ಆದರೆ ದಲಿತರು ಆಳ್ವಿಕೆ ನಡೆಸಿದ ಉದಾಹರಣೆ ಇಲ್ಲ ಎಂಬುದು ಅವರ ಅಭಿಪ್ರಾಯ.
ಈ ಅಭಿಪ್ರಾಯ ಒಪ್ಪದ ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಓ.ಅನಂತರಾಮಯ್ಯ ಅವರು, ಕುರಂಕೋಟೆಯನ್ನು ದಲಿತ ಕುರಂಗ ಆಳ್ವಿಕೆ ಮಾಡಿದಿರುವುದು ಸತ್ಯ. ಆದರೆ ಜಾತಿ ಕಾರಣಕ್ಕೆ ಇತಿಹಾಸಕಾರರು ಆತನ ಕುರಿತು ಹೆಚ್ಚಿನ ಅಧ್ಯಯನ ನಡೆಸಿಲ್ಲ. ಇತಿಹಾಸದಲ್ಲಿ ದಾಖಲಿಸಿಲ್ಲ ಎನ್ನುತ್ತಾರೆ. ಕುರಂಕೋಟೆ ಅನಂತರಾಮಯ್ಯನವರ ಹುಟ್ಟೂರು ಕೂಡ ಆಗಿದೆ.
ಕುರಂಗರಾಜನ ಕುರಿತು ಸಾಕಷ್ಟು ಪುರಾವೆಗಳಿವೆ. ಸಾಹಿತಿ ವಿ.ಚೀ.ಕೂಡ ಕುರಂಗರಾಜ ಒಬ್ಬ ಮಾದಿಗ ಎಂದು ಹೇಳಿದ್ದಾರೆ. ಕುರಂಗರಾಜ ಒಬ್ಬ ಸ್ವತಂತ್ರ ಆಡಳಿತಗಾರ. ಯಾವುದೇ ಸಾಮಂತ ರಾಜ ಅಲ್ಲ ಎಂಬುದು ಅನಂತರಾಮಯ್ಯ ಅಭಿಪ್ರಾಯ.
ಕುರಂಗರಾಜನ ಕುರಿತು ಸಾಕಷ್ಟು ಜನಪದೀಯ ಮಾಹಿತಿ ಕಲೆಹಾಕಿ `ಕುರಂಗರಾಜನ ವೈಭವ~ ಕಾದಂಬರಿ ಬರೆದಿರುವ ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಉಪನ್ಯಾಸಕ ಡಾ.ಓ.ನಾಗರಾಜ್ ಕೂಡ ದಲಿತ ಜನಾಂಗಕ್ಕೆ ಸೇರಿದ ಕುರಂಗ ಎಂಬ ವ್ಯಕ್ತಿಯೇ ಕುರಂಕೋಟೆ ಆಳ್ವಿಕೆ ಮಾಡಿದಾತ ಎಂದು ಹೇಳುತ್ತಾರೆ. ವೀ.ಚಿಕ್ಕವೀರಯ್ಯ ಅವರ ಸಿದ್ದರಬೆಟ್ಟ ಒಂದು ದರ್ಶನ ಕೃತಿಯಲ್ಲಿ ಕುರಂಗರಾಜನ ಪ್ರಸ್ತಾಪ ಮಾಡಿದ್ದಾರೆ. ಇತಿಹಾಸ ತಜ್ಞರು ಹೆಚ್ಚಿನ ಸಂಶೋಧನೆ ಕೈಗೊಂಡಲ್ಲಿ ನಿಜಾಂಶ ಹೊರಬೀಳಬಹುದು.
ರಾಜ್ಕುಮಾರ್ ಇಷ್ಟದ ಬೆಟ್ಟ
ಕುರಂಕೋಟೆ ಇರುವ ಸಿದ್ದರಬೆಟ್ಟ ಡಾ.ರಾಜ್ಕುಮಾರ್ ಅವರ ಇಷ್ಟದ ಸ್ಥಳವಾಗಿತ್ತು. ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ವೀರೇಂದ್ರ ಪಾಟೀಲ್ ಅವರಿಗೆ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಈ ಇಬ್ಬರು ಕೂಡ ಸಿದ್ದರಬೆಟ್ಟ ವೀಕ್ಷಣೆಗೆ ಬಂದಿದ್ದರು.
ಜೀವ ವೈವಿಧ್ಯದ ಖಜಾನೆ
ಸಿದ್ದರಬೆಟ್ಟಕ್ಕೆ ಬಂದಿದ್ದ ಪ್ರಸಿದ್ಧ ಪರಿಸರ ತಜ್ಞ ಮಾಧವ್ ಗಾಡ್ಗೀಲ್ ಇದೊಂದು ಜೀವ ವೈವಿಧ್ಯದ ಖಜಾನೆ ಎಂದು ಕರೆದಿದ್ದರು.
ಇಲ್ಲಿಯವರೆಗಿನ ಜಿಲ್ಲೆಯ ಇತಿಹಾಸ ಮುರಿದುಕಟ್ಟುವ, ಮರುಸೃಷ್ಟಿಸುವ ಶಕ್ತಿ ತನ್ನೊಳಗೆ ಮುಚ್ಚಿಟ್ಟುಕೊಂಡಿದೆ ಈ ಊರು. ದಲಿತನೊಬ್ಬ ರಾಜನಾಗಿ ಮೆರೆದ ಕಥೆ ರಾಜ್ಯದ ಇತಿಹಾಸದಲ್ಲಿ ಅಪರೂಪ. ಆದರೆ ಸಿದ್ಧರಬೆಟ್ಟದ ತಪ್ಪಲಿನಲ್ಲಿರುವ ಕುರಂಕೋಟೆಯನ್ನು ಆಳ್ವಿಕೆ ನಡೆಸಿದ್ದು ದಲಿತ ರಾಜ ಕುರಂಗರಾಜ!
ದಲಿತ ಸಮುದಾಯದ ಕುರಂಗ ಪ್ರಭುವೇ ಕುರಂಕೋಟೆ ಆಳ್ವಿಕೆ ನಡೆಸಿದ ಎಂಬುದಕ್ಕೆ ದಾಖಲೆ ಸಿಗುವುದಿಲ್ಲ. ಆದರೆ ನಾನೂರು ವರ್ಷಗಳ ಹಿಂದೆ ಕುರಂಗ ಎಂಬಾತ ಕುರಂಕೋಟೆ ಸುತ್ತಮುತ್ತಲ ಗ್ರಾಮಗಳ ಆಳ್ವಿಕೆ ಮಾಡಿದ್ದ ಎಂಬ ಐತಿಹ್ಯ ಈ ಗ್ರಾಮದ ಹೆಗ್ಗಳಿಕೆ. ಕುರಂಕೋಟೆಯ ಪಾಳೇಗಾರನಾಗಿ ಮಧುಗಿರಿಯ ಮುಮ್ಮಡಿ ಚಿಕ್ಕಪ್ಪಗೌಡ ನೇಮಿಸಿದ ಎಂಬ ನಂಬಿಕೆಯಿದೆ. ಆದರೆ ಈತ ಒಬ್ಬ ಸ್ವತಂತ್ರ ಆಡಳಿತಗಾರ ಎಂಬುದಕ್ಕೆ ಹೆಚ್ಚಿನ ಒತ್ತು ಇದೆ.
`ಇಡೀ ಕರ್ನಾಟಕದಲ್ಲಿ ಆದಿ ಕರ್ನಾಟಕ ಜನಾಂಗದ ವ್ಯಕ್ತಿ ಕೋಟೆ ಕಟ್ಟಿ ಆಳಿದ ದಾಖಲೆ ಕುರಂಕೋಟೆ ಬಿಟ್ಟರೆ ಎಲ್ಲೂ ಇಲ್ಲ. ಬೆಟ್ಟದ ಮೇಲೆ ದೇಸೀ ಮಾದರಿಯಲ್ಲಿ ಕೋಟೆ ಕಟ್ಟಿಸಲಾಗಿದೆ. ಕೆರೆ, ಕೊಳ ಕಟ್ಟಿಸಿದ್ದಾನೆ. ಆತನ ನೆನಪಿಗಾಗಿ ಬೆಟ್ಟದ ಕೆಳಗೆ ಕುರಂಕೋಟೆ ಗ್ರಾಮ ಕಟ್ಟಿದ. ಈ ಗ್ರಾಮ ಈಗಲೂ ಇದೆ~ ಎಂದು ಲೇಖಕ ಎಚ್.ಕೆ.ನರಸಿಂಹಮೂರ್ತಿ ಹೇಳುತ್ತಾರೆ.
ಕೊರಟಗೆರೆ ತಾಲ್ಲೂಕಿಗೆ ಸೇರಿರುವ ಕುರಂಕೋಟೆ ಸಿದ್ದರಬೆಟ್ಟದ ತಪ್ಪಲಿನಲ್ಲಿರುವ ಮುನ್ನೂರು ಮನೆಗಳಿರುವ ಗ್ರಾಮ. ದಲಿತರು, ನಾಯಕರು, ಸವಿತಾ ಸಮಾಜ, ಒಕ್ಕಲಿಗರು, ಲಿಂಗಾಯತ ಸಮುದಾಯದವರು ಇಲ್ಲಿದ್ದಾರೆ.
ವಿಶೇಷ ಔಷಧಿ ಗಿಡಮೂಲಿಕೆಗಳಿಗೆ ಹೆಸರಾದ ಸಿದ್ಧರಬೆಟ್ಟ ಒಂದು ಕಾಲಕ್ಕೆ ದಲಿತ ಪಾಳೇಗಾರನ ಕೋಟೆಯಾಗಿತ್ತು. ಸಿದ್ದರಬೆಟ್ಟದ ಮೇಲೆ ಈಗಲೂ ಕೋಟೆಯ ಪಳೆಯುಳಿಕೆಗಳಿವೆ. ಕುರಂಕೋಟೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಜನಪದೀಯ ಮಾಹಿತಿಗಳು, ಲಾವಣಿಗಳು ಕುರಂಕೋಟೆಯನ್ನು ಆಳ್ವಿಕೆ ಮಾಡಿದ್ದು ದಲಿತ ರಾಜ ಎನ್ನುತ್ತವೆ. ಆದರೆ ಇತಿಹಾಸದ ಪುರಾವೆ ಸಿಗದ ಕಾರಣ ಖಚಿತವಾಗಿ ಹೇಳಲು ಆಗುತ್ತಿಲ್ಲ.
ಕುರಂಗ ದಲಿತನಾದ ಕಾರಣಕ್ಕೆ ಈ ಕೋಟೆಯ ಇತಿಹಾಸ ಕೆದಕುವಲ್ಲಿ ಇತಿಹಾಸಕಾರರು ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂಬ ಮಾತುಗಳೂ ಇವೆ. ದಲಿತ ಎಂಬ ಕಾರಣಕ್ಕೆ ಆಗಿನ ಬರಹಗಾರರು ಕೂಡ ಈ ಕೋಟೆಯ ಕುರಿತು ಏನನ್ನೂ ದಾಖಲಿಸದೆ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಕೋಟೆಯ ಸುತ್ತಲೂ ಅನೇಕ ಶಾಸನಗಳಿವೆ, ವಿಗ್ರಹಗಳಿವೆ. ಇತಿಹಾಸ ಕೆದಕಬಲ್ಲ ಒಳ ಕುರುಹುಗಳಿವೆ. ಇಷ್ಟಿದ್ದು ಕೋಟೆಯ ಕುರಿತು ಇಲ್ಲಿಯವರೆಗೂ ಗಂಭೀರ ಸಂಶೋಧನೆ, ಅಧ್ಯಯನ ಆಗಿಲ್ಲ.
ಕುರಂಕೋಟೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಕುರಂಗರಾಜನ ಕುರಿತು ಅನೇಕ ಕತೆಗಳನ್ನು ಈಗಲೂ ಹೇಳುತ್ತಾರೆ. ತಲಾತಲಾಂತರದಿಂದ ಕೇಳಿಕೊಂಡು ಬಂದಿರುವ ಜನರ ಮಾತುಗಳು ನಿಜವೇ ಆಗಿದ್ದಲ್ಲಿ ಕುರಂಕೋಟೆ ಗ್ರಾಮವು ರಾಜ್ಯ ಮಾತ್ರವಲ್ಲ ದೇಶವೇ ಹೆಮ್ಮೆ ಪಡುವಂಥ ಗ್ರಾಮವಾಗಲಿದೆ. ದೇಶದ ಇತಿಹಾಸದ ಹೊಸ ನೋಟಕ್ಕೆ ಮುನ್ನಡಿ ಬರೆಯಲಿದೆ.
ಏನಿದೆ ಕೋಟೆಯಲ್ಲಿ:
ಸಿದ್ದರಬೆಟ್ಟದ ಮೇಲಿನ ಅಳಿದುಳಿದಿರುವ ಕೋಟೆಯಲ್ಲಿ ಸಾಕಷ್ಟು ಮಾಹಿತಿ ಈಗಲೂ ಲಭ್ಯ. ಸಿದ್ದೇಶ್ವರ ಸ್ವಾಮೀಜಿ ಎಂಬುವರು ಕುರಂಗನ ಆಸ್ಥಾನ ಗುರುಗಳಾಗಿದ್ದರು. ಸುವರ್ಣಗಿಂಡಿ ಎಂದು ಕರೆಯಲಾಗುವ ಗುಹೆಯಲ್ಲಿರುವ ಸಣ್ಣಬಾವಿಯ ಪಕ್ಕವೇ ಗುರುಗಳ ಪೀಠವಿದೆ. ಈ ಗುರುಗಳು ಇಲ್ಲಿಯೇ ಲಿಂಗೈಕ್ಯರಾದರು ಎಂಬ ನಂಬಿಕೆ ಇದ್ದು, ಈಗಲೂ ಪೂಜೆ ನಡೆಯುತ್ತಿದೆ.
ಅರ್ಧಚಂದ್ರ ಆಕೃತಿಯ ಬೆಟ್ಟದ ಮೇಲಿರುವ ಅಲಸಂದೆ ಕೆರೆಯನ್ನು ಕುರಂಗರಾಜನೇ ಕಟ್ಟಿಸಿದ ಎಂಬ ಪ್ರತೀತಿ ಇದೆ. ಗಲ್ಲೇಬಾನಿ ಎಂದು ಕರೆಯುವ ದೊಣೆ ಇದ್ದು, ಇಲ್ಲಿಯೇ ಚರ್ಮದ ನಾಣ್ಯ ತಯಾರಿಸಲು ಚರ್ಮ ನೆನೆ ಹಾಕಲಾಗುತ್ತಿತ್ತು ಎನ್ನಲಾಗುತ್ತದೆ.
ಆನೆ ಮತ್ತು ಕುದುರೆಗಳಿಗೆ ನೀರುಣಿಸುವ ಲದ್ದಿಕಟ್ಟೇ ಇದೆ. ಬಂಡೆಯ ಮೇಲಿರುವ ನಿಸರ್ಗದತ್ತವಾಗಿ ರೂಪಿತವಾಗಿರುವ ಮೊಟ್ಟೆಯಾಕಾರದ ಬಾವಿ ಇಲ್ಲಿನ ವಿಶೇಷವಾಗಿದೆ. ಇಲ್ಲಿರುವ ಶಿವಪುಷ್ಕರಣಿ ಬಾವಿಯ ಪಕ್ಕವೇ ಅರಮನೆ ಇತ್ತು.
ಗ್ರಾಮದ ಮಧ್ಯೆ ಸಿಪಾಯಿಗಳಿಗಾಗಿಯೇ ನಿರ್ಮಿಸಿದ್ದ ಮಲ್ಲಪ್ಪನಗುಡಿ ಈಗ ಪಾಳುಬಿದ್ದಿದೆ. ಕಂಚುಗಾರರ ಬೀದಿ ಈಗ ಹೊಲಗಳಾಗಿವೆ. ಹೊಲ ಉಳುಮೆ ಮಾಡುವಾಗ ಒಡವೆ, ಮಡಕೆ ಚೂರು, ಕಬ್ಬಿಣದ ಅಸ್ತ್ರಗಳು ಈಗಲೂ ಸಿಗುತ್ತವೆ ಎನ್ನುತ್ತಾರೆ ಗ್ರಾಮದ ಕೆ.ಎಸ್.ರಾಮಚಂದ್ರಪ್ಪ.
ಕುರಂಗರಾಯ ಪ್ರೇಯಸಿ ವಾಸಿಸುತ್ತಿದ್ದ ಬೆಟ್ಟದ ಮೇಲಿನ ಅರಮನೆ ಜಾಗವನ್ನು ಸೂಳೆಕಲ್ಲು ಎಂದೇ ಜನ ಕರೆಯುತ್ತಾರೆ. ಯೋಧ ಪಾತಪ್ಪ ಮಡಿದ ಪಾತಪ್ಪನ ಗುಂಡು, ಬಜೆಹಳ್ಳ, ಕೊಲುಮೆ ಗುಂಡು, ಮಾದಗಿತ್ತಿ ಮಡು ಮುಂತಾದವು ಕುರಂಗರಾಜನ ಕತೆ ಸಾರುತ್ತಿವೆ.
ಆ ಕಾಲದಲ್ಲಿ ಪ್ರತಿಹಳ್ಳಿಗೂ ಒಂದೊಂದು ಕೋಟೆಗಳಿದ್ದವು. 1800ನೇ ಇಸವಿಯಲ್ಲಿ ಈಗಿನ ಪಾವಗಡ ತಾಲ್ಲೂಕು ಜಿಲ್ಲಾ ಕೇಂದ್ರವಾಗಿತ್ತು. ಪಾವಗಡ ಸಂಸ್ಥಾನಕ್ಕೆ 131 ಹಳ್ಳಿಗಳು ಸೇರಿದ್ದವು. ಇವುಗಳಲ್ಲಿ 125 ಹಳ್ಳಿಗಳಿಗೆ ಕೋಟೆಗಳಿದ್ದವು. ಹೀಗಾಗಿ ಕುರಂಕೋಟೆಯನ್ನು ಬೇರೆ ನೆಲೆಯಿಂದ ನೋಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.