ತಿಪಟೂರು: ‘ಜೆಡಿಎಸ್ನಿಂದ ಟಿಕೆಟ್ ಸಿಗದಿದ್ದರೂ ಪಕ್ಷೇತರವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ’ ಎಂದು ಜೆಡಿಎಸ್ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಬಿ.ನಂಜಾಮರಿ ಸ್ಪಷ್ಟಪಡಿಸಿದರು. ತಾಲ್ಲೂಕಿನ ಬೆಳಗರಹಳ್ಳಿಯಲ್ಲಿ ಮಂಗಳವಾರ ನಡೆದ ಬೆಂಬಲಿಗರ ಸಭೆಯಲ್ಲಿ ಅವರು ಮಾತನಾಡಿದರು.
‘ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನನಗೆ ಟಿಕೆಟ್ ನೀಡುತ್ತಾರೆ ಎಂಬ ನಂಬಿಕೆ ಇದೆ. ಅದು ಹುಸಿಯಾದರೆ ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಕಾರ್ಯಕರ್ತರ ಮತ್ತು ಬೆಂಬಲಿಗರ ಒತ್ತಾಯಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದ್ದೇನೆ. ಜೆಡಿಎಸ್ ನನ್ನ ಮಾತೃ ಪಕ್ಷವಾಗಿದೆ. ದೇವೇಗೌಡ ಅವರು ಟಿಕೆಟ್ ನೀಡುವುದಾಗಿ ನನ್ನ ಹೆಸರನ್ನು ತಮ್ಮ ಅಧಿಕೃತ ಡೈರಿಯಲ್ಲಿ ಬರೆದಿಟ್ಟಿದ್ದಾರೆ’ ಎಂದರು.
‘ಎರಡು ಅವಧಿಯಲ್ಲಿ ಶಾಸಕನಾಗಿದ್ದ ವೇಳೆ ತಾಲ್ಲೂಕಿಗೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡಿಸಿದ್ದೇವೆ. ಅವು ಈಗಲೂ ನನ್ನ ಕೈ ಹಿಡಿಯುತ್ತವೆ ಎಂಬ ನಂಬಿಕೆ ಇದೆ. ಮತ್ತೆ ಶಾಸಕನಾದರೆ ಕ್ವಿಂಟಲ್ ಕೊಬ್ಬರಿ ಬೆಲೆ ₹ 15 ಸಾವಿರ ದಾಟಿಸುವುದು ಸತ್ಯ’ ಎಂದು ಹೇಳಿದರು.
ನಗರಸಭೆ ಮಾಜಿ ಅಧ್ಯಕ್ಷ ದಿನೇಶ್ಕುಮಾರ್ ಮಾತನಾಡಿ, ‘ಜೆಡಿಎಸ್ನಿಂದ ಸ್ಪರ್ಧಿಸಿದರೆ ನಂಜಾಮರಿ ಶಾಸಕರಾಗುವುದು ಖಚಿತ. ಅವರ ಗೆಲುವಿಗೆ ಸಮಾನ ಮನಸ್ಕರೆಲ್ಲಾ ಒಗ್ಗಟ್ಟಾಗಿ ದುಡಿಯೋಣ’ ಎಂದರು.
ಮುಖಂಡ ಜಯರಾಂ, ಮುಖಂಡರಾದ ಮಾರನಗೆರೆ ವಿಜಯಕುಮಾರ್, ಗಂಗನಘಟ್ಟದ ಗೋವಿಂದಸ್ವಾಮಿ, ಸೈಯದ್ ಜಹೇರಾ ಹುಸೇನ್ ಮಾತನಾಡಿದರು. ದಸರೀಘಟ್ಟದ ಬಾಬು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಯಾಶಂಕರ್, ಪ್ರಭುಶಂಕರ್, ಹುಣಸೇಘಟ್ಟದ ಪ್ರಕಾಶ್, ಸೂಗುರು ಗುರುಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.