ತುಮಕೂರು: ಸ್ವದೇಶಿ ಜಾಗರಣ ಮಂಚ್ ಗುರುವಾರ (ಫೆಬ್ರುವರಿ 7 ರಿಂದ 10)ದಿಂದ ಭಾನುವಾರದವರೆಗೆ ನಗರದ ಗಾಜಿನ ಮನೆಯಲ್ಲಿ ನಾಲ್ಕು ದಿನಗಳ ಕಾಲ ‘ಸ್ವದೇಶಿ ಮೇಳ’ವನ್ನು ಆಯೋಜಿಸಿದೆ ಎಂದು ಸ್ವದೇಶಿ ಜಾಗರಣ ಮಂಚ್ನ ಪ್ರಾಂತ ಸಂಘಟಕ ಕೆ.ಜಗದೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಸ್ವದೇಶಿ ವಸ್ತುಗಳನ್ನು ಪರಿಚಯಿಸುವ ಉದ್ದೇಶದಿಂದ ದೇಶದಾದ್ಯಂತ ಈ ಮೇಳವನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ ತುಮಕೂರು ನಗರದಲ್ಲಿಯೂ ಹಮ್ಮಿಕೊಳ್ಳಲಾಗಿದೆ ಎಂದರು.
ಗುರುವಾರ ಬೆಳಿಗ್ಗೆ 11.30ರಿಂದ ಆಯುರ್ವೇದ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಂಜೆ 5.30ಕ್ಕೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸೆಲ್ಕೋ ಸೋಲಾರ್ನ ಸಂಸ್ಥಾಪಕ ಹರೀಶ್ ಹಂದೆ ಉದ್ಘಾಟಿಸಲಿದ್ದಾರೆ. ಮಹಾನಗರ ಪಾಲಿಕೆ ಮೇಯರ್ ಲಲಿತಾ ರವೀಶ್ ಅಧ್ಯಕ್ಷತೆ ವಹಿಸಲಿದ್ದು, ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಹಾಗೂ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಉಪಸ್ಥಿತರಿರುವರು ಎಂದು ಹೇಳಿದರು.
ಶುಕ್ರವಾರ (ಫೆಬ್ರುವರಿ 8) ಬೆಳಿಗ್ಗೆ 10.30ರಿಂದ ರೈತರೊಂದಿಗೆ ಸಂವಾದ, ಮಧ್ಯಾಹ್ನ 2.30 ರಿಂದ ಉಚಿತ ಪಂಚಗವ್ಯ (ಗೋ ಚಿಕಿತ್ಸೆ) ತಪಾಸಣಾ ಶಿಬಿರ, ಸಂಜೆ 5.45ರಿಂದ ‘ನಮ್ಮ ಹೆಮ್ಮೆಯ ಭಾರತ’ ಕುರಿತು ಉಪನ್ಯಾಸ ಕಾರ್ಯಕ್ರಮ ಇರಲಿದೆ ಎಂದರು.
ಶನಿವಾರ (ಫೆಬ್ರುವರಿ 9) ಬೆಳಿಗ್ಗೆ 10.30ರಿಂದ ಕಾಲೇಜು ವಿದ್ಯಾರ್ಥಿಗಳ ಸಮಾವೇಶ, ಮಧ್ಯಾಹ್ನ 2.30ರಿಂದ ದೇಶಭಕ್ತಿ ಗೀತೆಗಳ ಸ್ಪರ್ಧೆ, ಸಂಜೆ 5.45ರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಭಾನುವಾರ (ಫೆಬ್ರುವರಿ 10) ಬೆಳಿಗ್ಗೆ 9ರಿಂದ ರಂಗೋಲಿ ಸ್ಪರ್ಧೆ ಹಾಗೂ 10ರಿಂದ ಮನೆ ಮದ್ದು ತಯಾರಿಕಾ ಶಿಬಿರ, ಮಧ್ಯಾಹ್ನ 3.30ರಿಂದ ಸ್ವದೇಶಿ ಸಂಕಲ್ಪ ಪರಿವಾರ ಪ್ರಬೋಧನ, ಸಂಜೆ 5.45 ರಿಂದ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ಪ್ರತಿ ದಿನ ರಾತ್ರಿ 7 ರಿಂದ ಸೂತ್ರ ಸಲಾಕೆ ಬೊಂಬೆಯಾಟ, ಯಕ್ಷಗಾನ ಹಾಗೂ ನೃತ್ಯ ರೂಪಕ ಹೀಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ತಿಳಿಸಿದರು.
ಜಿಲ್ಲಾ ಸಂಯೋಜಕ ಎಸ್.ಸತ್ಯಾನಂದ, ವಿಶ್ವನಾಥ್, ಚಂದನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.