ADVERTISEMENT

ಬಿರುಕುಬಿಟ್ಟ ದೇಗುಲದ ಗೋಡೆಗಳು

ಮಧುಗಿರಿ: ಬೀಳುವ ಹಂತದಲ್ಲಿ ಮಲ್ಲೇಶ್ವರ ಸ್ವಾಮಿ ಹಾಗೂ ವೆಂಕಟರಮಣ ಸ್ವಾಮಿ ದೇವಾಲಯದ ಕಲ್ಲುಗಳು

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 8:39 IST
Last Updated 6 ಜೂನ್ 2018, 8:39 IST
ಮಧುಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ದೇವಾಲಯದ ಗೋಪುರದಲ್ಲಿ ಗಿಡಗಳು ಬೆಳದಿರುವುದು
ಮಧುಗಿರಿ ಪಟ್ಟಣದ ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ದೇವಾಲಯದ ಗೋಪುರದಲ್ಲಿ ಗಿಡಗಳು ಬೆಳದಿರುವುದು   

ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ಹಾಗೂ ವೆಂಕಟರಮಣ ಸ್ವಾಮಿ ದೇವಾಲಯದ ಗೋಡೆ ಮತ್ತು ಗೋಪುರಗಳಲ್ಲಿ ಗಿಡಗಳ ಬೇರುಗಳು ಹರಡಿ, ಗೋಡೆಗಳು ಬಿರುಕುಗೊಂಡು ಕಲ್ಲುಗಳು ಬೀಳುವ ಹಂತ ತಲುಪುತ್ತಿವೆ.

ಈ ಎರಡು ದೇವಾಲಯಗಳು ಕಲ್ಲು ಬಂಡೆಗಳಿಂದ ಕೂಡಿವೆ. ಈ ದೇವಾಲಯಗಳಿಗೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರುತ್ತವೆ. ಇತಿಹಾಸ ಸಾರುವ ದೇವಾಲಯಗಳನ್ನು ಅಭಿವೃದ್ಧಿಗೊಳಿಸಿ, ಮುಂದಿನ ಪೀಳಿಗೆಗೆ ಉಳಿಸಬೇಕೆಂಬುದು ಭಕ್ತರ ಕೂಗು.

ಎರಡು ದೇವಾಲಯಗಳ ಸುತ್ತಲೂ ದೊಡ್ಡ ಗಾತ್ರದ ಕಲ್ಲಿನ ಗೋಡೆ ಹಾಗೂ ಬೃಹತ್ ಗೋಪುರಗಳಿವೆ. ಗೋಡೆಗಳಲ್ಲಿ ಗಿಡ- ಮರಗಳು ಬೆಳೆದು ಅವುಗಳ ಬೇರುಗಳು ಆಳವಾಗಿ ಇಳಿದು ಗೋಡೆ ಮತ್ತು ಕಲ್ಲುಗಳು ಸಡಿಲಗೊಳ್ಳುತ್ತಿವೆ.

ADVERTISEMENT

ಈ ಎರಡು ದೇವಾಲಯಗಳು ಪುರಾತತ್ವ ಇಲಾಖೆಗೆ ಸೇರಿದ್ದು, ದೇವಾಯಗಳನ್ನು ಸಂಪೂರ್ಣವಾಗಿ ಇಲಾಖೆ ನಿರ್ಲಕ್ಷಿಸಿರುವುದರಿಂದಲೇ ಗಿಡಗಳು ಬೆಳೆದು ದೇವಾಲಯದ ಗೋಡೆಗಳು ಶಿಥಿಲಗೊಳ್ಳುತ್ತಿವೆ. ಎರಡು ದೇವಾಲಯಗಳಿಗೆ ಕಾವಲುಗಾರರನ್ನು ನೇಮಿಸ ಬೇಕೆಂಬುದು ಭಕ್ತರ ಆಗ್ರಹವಾಗಿದೆ.

2014ರಲ್ಲಿ ವೆಂಕಟರಮಣ ದೇವಾಲಯದ ಕಲ್ಲಿನ ಗೋಡೆಯಲ್ಲಿ ಗಿಡ- ಮರಗಳು ಬೆಳೆದ ಪರಿಣಾಮ ಕಲ್ಲಿನ ಬಂಡೆ ಕೆಳಗೆ ಬಿದ್ದಿತ್ತು. ಅದನ್ನು ಸರಿಪಡಿಸಲು ಹಲವು ತಿಂಗಳು ಬೇಕಾಯಿತು ಹಾಗೂ ಸಾಕಷ್ಟು ಹಣ ಕೂಡ ಖರ್ಚಾಯಿತು. ಗಿಡಗಳು ಬೆಳೆಯುವ ಹಂತದಲ್ಲೇ ಅವುಗಳನ್ನು ಕಿತ್ತು ಹಾಕಿದರೆ ಗೋಡೆ ಮತ್ತು ಗೋಪುರಗಳಿಗೆ ಯಾವುದೇ ರೀತಿಯ ಅಪಾಯ ಉಂಟಾಗುವುದಿಲ್ಲ ಎನ್ನುತಾರೆ ಭಕ್ತರು.

ಬಿರುಕುಗೊಂಡ ಗೋಡೆಗಳಲ್ಲಿ ಮಳೆಗಾಲದಲ್ಲಿ ನೀರು ಹೋಗುತ್ತಿವೆ. ಈಗಾಗಲೇ ಎರಡು ದೇವಾಯದ ಗೋಡೆಗಳು ಬಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಇರುವ ಗೋಡೆಗಳು ಕುಸಿಯುವ ಮುನ್ನವೇ ಸಂಬಂಧ ಪಟ್ಟ ಅಧಿಕಾರಿಗಳು ಮುಜಾಗ್ರತೆ ಕ್ರಮ ಕೈಗೊಂಡರೆ ದೇವಾಲಯ ಹಾಗೂ ಹಣವನ್ನು ಉಳಿಸಬಹುದು ಎಂಬುದು ಭಕ್ತರ ಆಶಯ.

**
ದೇವಾಲಯದ ಗೋಡೆಗಳಲ್ಲಿ ಗಿಡಗಳು ಬೆಳೆದು ಮರಗಳಾಗುತ್ತಿವೆ. ಅವುಗಳನ್ನು ಈ ಹಂತದಲ್ಲೇ ತೆರವುಗೊಳಿಸಿದರೆ ಯಾವುದೇ ಅಪಾಯವಾಗುವುದಿಲ್ಲ
ಸಹನಾ , ಅಧ್ಯಕ್ಷೆ, ವಾಸವಿ ಕ್ಲಬ್
**
ದೇವಾಲಯಗಳು ಸುಂದರ ವಾಗಿದ್ದು, ಪುರಾತತ್ವ ಇಲಾಖೆ ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಗೋಡೆಗಳು ಉರುಳುತ್ತಿವೆ
ಮಂಜುಳಾ, ಮುಖ್ಯಶಿಕ್ಷಕಿ, ಕಾರ್ಡಿಯಲ್ ಪ್ರೌಢಶಾಲೆ 

– ಟಿ.ಪ್ರಸನ್ನಕುಮಾರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.