ತುಮಕೂರು: ಆ ವ್ಯಾಪಾರಿ ಸೇಬಿನ ಕುರಿತು ಮಾತನಾಡ ತೊಡಗಿದರು. ಮಾರುಕಟ್ಟೆ ಪ್ರಾಂಗಣದ ಗೋದಾಮುಗಳಲ್ಲಿ ರಾಶಿರಾಶಿಯಾಗಿ ಒಟ್ಟಿದ್ದ ತೆಂಗಿನಕಾಯಿ ಕುರಿತು ಕೇಳಿದರೆ ಅವರು ಸೇಬು ಬಂದಿದ್ದರೆ ಒಂದಿಷ್ಟು ತೆಂಗು ಬಿಕರಿಯಾಗುತ್ತಿದ್ದ ಕನಸಿಗೆ ಬಿದ್ದರು. ಕಲ್ಪತರು ನಾಡಿನ ತೆಂಗಿನಕಾಯಿಗೂ ದೆಹಲಿಗೂ ಸಂಬಂಧವಿರುವಂತೆ, ಇಲ್ಲಿ ತಿನ್ನುವ ಸೇಬಿಗೂ ತೆಂಗಿನ ಮಾರಾಟಕ್ಕೂ ನಂಟಿದೆ.
ದೆಹಲಿಯಿಂದ ಸೇಬು ತುಂಬಿಕೊಂಡು ಬರುವ ಲಾರಿಗಳು ಈ ಕಡೆಯಿಂದ ಖಾಲಿ ಹೋಗುವ ಬದಲಿಗೆ ಚೌಕಾಶಿ ಬಾಡಿಗೆಗೆ ತೆಂಗಿನ ಕಾಯಿ ತುಂಬಿಕೊಂಡು ಹೋಗುತ್ತವೆ. ಬಾಡಿಗೆಯಲ್ಲಿ ಸ್ವಲ್ಪ ಹಣ ಉಳಿದರೆ ಸಾಗಾಟ ವೆಚ್ಚ ಕಡಿಮೆಯಾಗಿ ದೆಹಲಿಯಲ್ಲಿ ತೆಂಗಿನಕಾಯಿಗೆ ಬೆಲೆ ಕಡಿಮೆ ಸಿಕ್ಕರೂ ಮಾರಲಾಗುತ್ತದೆ.
ದೆಹಲಿಗೆ ಲಾರಿಯೊಂದಕ್ಕೆ ₨ 75 ಸಾವಿರ ಬಾಡಿಗೆ ನೀಡಬೇಕು. ಇದರಲ್ಲಿ ₨ 20 ಸಾವಿರ ಕಡಿಮೆಯಾದರೂ ಆ ಮಟ್ಟಿಗೆ ತೆಂಗಿನಕಾಯಿ ಹೆಚ್ಚು ಮಾರಾಟವಾಯಿತೆಂದೇ ಮಾರಾಟಗಾರರ ಲೆಕ್ಕಾಚಾರ.
ಮಾರುಕಟ್ಟೆಯ ಸರಪಳಿ ಸಂಬಂಧಗಳ ಲೆಕ್ಕಾಚಾರ ಏನೇ ಇರಲಿ, ಈ ವಾರದ ಮಾರುಕಟ್ಟೆ ಬೆಲೆಯಲ್ಲಿ ಸ್ಥಿತಂತರ ಕಂಡುಬರಲಿಲ್ಲ. ಅತ್ಯಲ್ಪ ಬದಲಾವಣೆ ಬಿಟ್ಟರೆ ಕಳೆದ ವಾರದ ಮಾರುಕಟ್ಟೆ ದರದಲ್ಲಿ ಹೆಚ್ಚು ಬದಲಾವಣೆ ಕಾಣಲಿಲ್ಲ. ದೆಹಲಿಯಲ್ಲಿ ಚಳಿ ಹೆಚ್ಚುತ್ತಿರುವ ಕಾರಣ ತೆಂಗಿನಕಾಯಿ ಮಾರುಕಟ್ಟೆಯಲ್ಲಿ ಹಿಂಜರಿಕೆ ಕಂಡು ಬಂದರೂ ಬೆಲೆಯಲ್ಲಿ ಇಳಿಕೆ ಕಾಣಲಿಲ್ಲ. ಕಾಯಿಯೊಂದಕ್ಕೆ ಬೆಲೆ ₨ 9–11ರ ವರೆಗೂ ಇತ್ತು. ತಾಂಬೂಲ ಕಾಯಿಗೆ ದೊಡ್ಡಬಳ್ಳಾಪುರದ ವರ್ತಕರಿಂದ ಬೇಡಿಕೆ ಬಂದಿರುವುದರಿಂದ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡಿತು.
ಕೊಬ್ಬರಿ ಸ್ಥಿರತೆ: ಕೊಬ್ಬರಿ ಬೆಲೆಯಲ್ಲಿ ಸ್ಥಿರತೆ ಕಂಡುಬಂತು. ವಾರ ಪೂರ ತಿಪಟೂರು ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₨ 6900–7130 ಇತ್ತು.
ಬೆಂಬಲ ಬೆಲೆ ನಿರೀಕ್ಷೆಯಲ್ಲಿ ರಾಗಿ: ರಾಗಿ ಬೆಲೆಯಲ್ಲಿ ಸುಧಾರಣೆ ಕಾಣಲಿಲ್ಲ. ಬೆಂಬಲ ಬೆಲೆಯಲ್ಲಿ ರಾಗಿ ಕೊಳ್ಳುವುದಾಗಿ ಸರ್ಕಾರ ಪ್ರಕಟಿಸಿದೆ. ಇದಕ್ಕೆ ಮಾರುಕಟ್ಟೆ ಪ್ರತಿಕ್ರಿಯೆ ಕಾದು ನೋಡಬೇಕು.
ಬಣ್ಣ ಕಳೆದುಕೊಂಡ ಕಪ್ಪು ರಾಗಿ ಬೆಲೆ ಕ್ವಿಂಟಲ್ಗೆ ₨ 1440–1450 ಇತ್ತು. ಗುಣಮಟ್ಟದ ಕೆಂಪು ಬಣ್ಣದ ರಾಗಿ ಬೆಲೆ ₨ 1500–1600ಕ್ಕೆ ಬಂದು ನಿಂತಿತು.
ಸುಧಾರಿಸದ ಶೇಂಗಾ
ಶೇಂಗಾ ಬೆಲೆಯಲ್ಲೂ ಸುಧಾರಣೆ ಕಾಣಲಿಲ್ಲ. ಮಾರುಕಟ್ಟೆಗೆ ಬರುತ್ತಿರುವ ಶೇಂಗಾ ಗುಣಮಟ್ಟದಿಂದ ಕೂಡಿಲ್ಲ. ಇದರ ನಡುವೆ ಶೇಂಗಾ ಬೀಜದ ದರ ಇಳಿದಿರುವ ಕಾರಣ ಶೇಂಗಾ ಬೆಲೆಯಲ್ಲಿ ಚೇತರಿಕೆ ಕಾಣದಿರಲು ಕಾರಣ ಎಂದು ಹೇಳಲಾಗುತ್ತಿದೆ. ಕ್ವಿಂಟಲ್ಗೆ ₨ 3300–4000 ಬೆಲೆ ಇತ್ತು.
ಮುಸುಕಿನ ಜೋಳ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ ₨ 1000–1130 ಇದ್ದರೆ ಕೆಎಂಎಫ್ ಗುಣಮಟ್ಟದ ಜೋಳವನ್ನು ₨ 1300ಕ್ಕೆ ಕೊಳ್ಳುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.