ಚಿಂತಾಮಣಿ: ನಮ್ಮ ಸುತ್ತಮುತ್ತಲಿನ ಪರಿಸರವೇ ನಮ್ಮ ದೈನಂದಿನ ಗುರು, ಮನುಷ್ಯ ಎಷ್ಟೇ ಕಲಿತರೂ ಪರಿಪೂರ್ಣನಲ್ಲ, ಪ್ರಕೃತಿಯಿಂದ ಕಲಿಯುವುದು ಸಾಕಷ್ಠಿದೆ ಎಂದು ರಾಜ್ಯದ ಹಿರಿಯ ಐ.ಪಿ.ಎಸ್ ಅಧಿಕಾರಿ ರಾಮಸುಬ್ಬು ನುಡಿದರು. ನಗರದ ರಾಯಲ್ ವಿದ್ಯಾ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಸದಾ ನಾಲ್ಕು ಗೋಡೆಗಳ ಮದ್ಯದಲ್ಲಿ ಕಳೆಯದೆ ದೇಶಸುತ್ತಿ ಕೋಶ ಓದು ಎಂಬಂತೆ ಪರಿಸರದೊಂದಿಗೆ ಬೆರೆತು ಒಳಿತು ಕೆಡುಕುಗಳನ್ನು ಸಹಜವಾಗಿ ಪ್ರಕೃತಿಯಿಂದಲೇ ಕಲಿಯಬೇಕು. ವಿದ್ಯಾರ್ಥಿದೆಸೆಯಿಂದಲೇ ಪ್ರಕೃತಿಪ್ರೇಮವನ್ನು ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬೆಂಗಳೂರಿನ ಬಿ.ಬಿ.ಎಂ.ಪಿ ಕಾಲೇಜಿನ ಪ್ರಾಂಶುಪಾಲ ರಾಜಾರೆಡ್ಡಿ ಮಾತನಾಡಿ, ಚಿಂತಾಮಣಿ ನಗರವು ಶೈಕ್ಷಣಿಕವಾಗಿ ಬಹಳ ಮುಂದುವರೆದಿದೆ. ರಾಜಧಾನಿ ಬೆಂಗಳೂರಿನ ವಿದ್ಯಾ ಸಂಸ್ಥೆಗಳಿಗೂ ಪೈಪೋಟಿ ನೀಡುತ್ತಿರುವ ರಾಯಲ್ ಸಂಸ್ಥೆಯ ಸಾಧನೆ ಅನುಕರಣೀಯ. ಗ್ರಾಮಾಂತರ ಭಾಗಗಳಲ್ಲಿ ಗ್ರಾಮೀಣ ಬಡವರಿಗೆ ಬೆಂಗಳೂರಿನಲ್ಲಿ ಸಿಗುವಂತಹ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ಕೆ.ರಾಮಕೃಷ್ಣಾರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಬಿ.ಡಿ.ಎ ಪೊಲೀಸ್ ಅಧಿಕಾರಿ ಆರ್.ವಿ.ಚೌಡಪ್ಪ, ಪ್ರಾಂಶುಪಾಲ ಪ್ರೇಮಲತ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸರ್ದಾರ್ಬೇಗ್ ಸ್ವಾಗತಿಸಿದರು. ಸೌಮ್ಯ ಆನಂದ್ ನಿರೂಪಿಸಿದರು, ಶೈಲಜಾಯಾದವ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.