ADVERTISEMENT

ಮಲ್ಲಿಕಾರ್ಜುನಯ್ಯ ನಿಧನಕ್ಕೆ ಕಂಬನಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2014, 8:46 IST
Last Updated 14 ಮಾರ್ಚ್ 2014, 8:46 IST

ತುಮಕೂರು: ಲೋಕಸಭೆಯ ಮಾಜಿ ಉಪಸಭಾಧ್ಯಕ್ಷ, ಜನ ಸಂಘದ ನಾಯಕ ಎಸ್‌.ಮಲ್ಲಿಕಾರ್ಜುನಯ್ಯ ನಿಧನಕ್ಕೆ ರಾಜ­ಕಾರಣಿಗಳು, ಗಣ್ಯರು ಕಂಬನಿ ಮಿಡಿದಿದ್ದಾರೆ.

ಮಲ್ಲಿಕಾರ್ಜುನಯ್ಯ ನಿಧನದ ಸುದ್ದಿ ಕೇಳಿ ಅತೀವ ದುಃಖವಾಯಿತು. ಅವರ ಸಾವಿನಿಂದ ಸಾರ್ವಜನಿಕ ಜೀವನಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ಸಿದ್ದಗಂಗ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.

ಕರ್ನಾಟಕ ಒಬ್ಬ ಶ್ರೇಷ್ಠ ರಾಜಕಾರಣಿ ಕಳೆದು­ಕೊಂಡು ಬಡವಾಗಿದೆ ಎಂದು ಮಾಜಿ ಮುಖ್ಯ­ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಎಸ್.ಮಲ್ಲಿಕಾರ್ಜುನಯ್ಯ ಉತ್ತಮ ಸಂಸದೀಯ ಪಟುವಾಗಿದ್ದರು ಎಂದು ಬಾಳೆ­ಹೊನ್ನೂರು ರಂಭಾಪುರಿ ಮಠದ ವೀರ­ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

ಎಸ್.ಮಲ್ಲಿಕಾರ್ಜುನಯ್ಯ ಜಿಲ್ಲೆಯ ಹಿರಿಯ ಮತ್ತು ಮೇರು ರಾಜಕಾರಣಿಯಾಗಿದ್ದರು ಎಂದು ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸ್ಮರಿಸಿದ್ದಾರೆ.

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ. ಅವರ ನಿಧನದಿಂದ ಮೌಲ್ಯಧಾರಿತ ರಾಜಕಾರಣ ಮಾಡಿದ, ಸರಳ, ಸಜ್ಜನಿಕೆಯ, ಜನಪರಕಾಳ­ಜಿಯ ಹಿರಿಯ ಚೇತನವನ್ನು ಕಳೆದುಕೊಂಡಂ­ತಾಗಿದೆ ಎಂದು ಡಾ.ಎ.ಎಚ್‌.ಶಿವಯೋಗಿ­ಸ್ವಾಮಿ ಹೇಳಿದ್ದಾರೆ.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಸಾಗರನಹಳ್ಳಿ ಪ್ರಭು, ಗೌರವ ಕಾರ್ಯ­ದರ್ಶಿ ಅಬ್ದುಲ್‌ ಜಲೀಲ್‌ ಸಂತಾಪ ಸೂಚಿಸಿದ್ದಾರೆ.

ಗಣ್ಯರಿಂದ ದರ್ಶನ: ಮಲ್ಲಿಕಾರ್ಜುನಯ್ಯ ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಸಿದ್ದಗಂಗಾ ಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾ­ಚಾರ್ಯ ಸ್ವಾಮೀಜಿ, ಗೌರಿಶಂಕರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿ­ಯೂರಪ್ಪ, ಡಿ.ವಿ.ಸದಾನಂದ ಗೌಡ, ಜಗದೀಶ್‌ ಶೆಟ್ಟರ್‌ ಪಡೆದರು.

ಸಂಸದ ಜಿ.ಎಸ್‌.ಬಸವರಾಜ್‌, ಶಾಸಕರಾದ ಎಸ್‌.ಆರ್‌.ಶ್ರೀನಿವಾಸ್, ಸುರೇಶ್‌ಬಾಬು, ಸಿ.ಟಿ.ರವಿ, ಸುರೇಶ್‌ಗೌಡ, ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ವಿಧಾನ ಪರಿಷತ್‌ ಸದಸ್ಯರಾದ ಎಂ.ಡಿ. ಲಕ್ಷ್ಮೀನಾರಾ­ಯಣ್‌, ಡಾ.ಎಂ.ಆರ್‌.­ಹುಲಿ­ನಾಯ್ಕರ್‌ ಇನ್ನಿತರರು ಅಂತಿಮ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.