ಗುಬ್ಬಿ: ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಇಬ್ಬರು ಅಧಿಕಾರಿಗಳ ನಡುವಿನ ಆಡಳಿತಾತ್ಮಕ ಬಿಕ್ಕಟ್ಟಿನಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯದ ಕೆಲಸ ಕಾರ್ಯಗಳು ಕುಂಠಿತವಾಗಿವೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಿಪಟೂರಿನಿಂದ ನಿಯೋಜಿಸಲಾಗಿದ್ದ ಕಚೇರಿ ಅಧೀಕ್ಷಕಿ ಜಿ.ಕೆ.ಉಮಾದೇವಿ ಹಾಗೂ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಶ್ರೀನಿವಾಸ್ ನಡುವೆ ಕೆಲ ತಿಂಗಳಿಂದ ಕಚೇರಿ ಕಾರ್ಯಗಳ ಬಗ್ಗೆ ಹಲವು ಭಿನ್ನಾಭಿಪ್ರಾಯ ಉಂಟಾಗಿತ್ತು. ನಿಯೋಜನೆ ಮೂಲಕ ಬಂದ ಉಮಾದೇವಿ ಲೋಪಗಳನ್ನೇ ಹೆಚ್ಚಾಗಿ ಎಸೆಗಿರುವುದನ್ನು ಸಿಬ್ಬಂದಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ಅವರನ್ನು ತಿಪಟೂರಿಗೆ ಕಳುಹಿಸಿದ್ದರು. ಕೆಲ ದಿನಗಳಲ್ಲೇ ಮತ್ತೆ ಅವರನ್ನು ಗುಬ್ಬಿಗೆ ನಿಯೋಜಿಸಿರುವುದರಿಂದ ಸಮಸ್ಯೆಯಾಗಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಮಾತನಾಡಿ ಸಂಘಟನೆಯ ದೂರಿನ ಅನ್ವಯ ನಿಯೋಜನೆಯಾಗಿದ್ದ ಜಿ.ಕೆ.ಉಮಾದೇವಿ ಅವರ ಮೂಲ ಸ್ಥಾನ ತಿಪಟೂರಿಗೆ ಕಳುಹಿಸಲು ಒಪ್ಪಿ ತದ ನಂತರದಲ್ಲಿ ಮತ್ತೆ ಗುಬ್ಬಿಗೆ ನಿಯೋಜಿಸಿರುವುದರ ಮೂಲಕ ಸಂಘಟನೆಗೆ ಅವಮಾನಿಸಿದ್ದಾರೆ. ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ದ್ವಿಮುಖ ಆಡಳಿತ ನೀತಿಯನ್ನು ಖಂಡಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ತಾಲ್ಲೂಕು ದಸಂಸ ಸಂಚಾಲಕ ಬಿ.ವಿ.ರತ್ನಕುಮಾರ್, ಸಂಘಟನಾ ಸಂಚಾಲಕರಾದ ಜಿ.ಸಿ.ನಾಗರಾಜು, ಎನ್.ಜಿ.ಕೃಷ್ಣಮೂರ್ತಿ, ಲಕ್ಷ್ಮಣ್, ಗಂಗಾರಾಂ, ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ದೇವರಾಜು, ಕಾಡಶೆಟ್ಟಿಹಳ್ಳಿ ಸತೀಶ್, ಕೆ.ಟಿ.ಕೆ.ಪ್ರಭು ಮುಂತಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.