ADVERTISEMENT

ವಿವಿಧೆಡೆ ಶ್ರೀರಾಮನವಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 12:41 IST
Last Updated 20 ಏಪ್ರಿಲ್ 2013, 12:41 IST

ತುಮಕೂರು: ನಗರದ ಎಲ್ಲೆಡೆ ಶುಕ್ರವಾರ ಶ್ರೀರಾಮನವಮಿ ಸಂಭ್ರಮ ಕಂಡುಬಂತು. ದೇವಾಲಯಗಳಲ್ಲಿ ರಾಮನವಮಿ ಅಂಗವಾಗಿ ವಿಶೇಷ ಅಲಂಕಾರ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ನಗರದ ಎಲ್ಲ ದೇವಾಲಯಗಳು ಮತ್ತು ಎಲ್ಲ ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಪ್ರಮುಖರು ರಾಮನವಮಿ ಅಂಗವಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಜ್ಜಿಗೆ, ಪಾನಕ, ಕೋಸಂಬರಿ ಹಂಚಿಕೆ ಮಾಡಲಾಯಿತು. ದೇವಾಲಯಗಳಲ್ಲಿ ಭಕ್ತರು ಸಾಲಾಗಿ ನಿಂತು ಕೋಸಂಬರಿ, ಪಾನಕ ಸ್ವೀಕರಿಸಿದರು.

ನಗರದ ಮಹಾಲಕ್ಷ್ಮೀ ನಗರ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರಸ್ವಾಮಿಗೆ ಸಾಮೂಹಿಕ ಅಭಿಷೇಕ, ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಲಕ್ಷ್ಮೀಗೆ ಸಹಸ್ರನಾಮಾರ್ಚನೆ ಏರ್ಪಡಿಸಲಾಗಿತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಹಾಮಂಗಳಾರತಿ, ಪಾನಕ ಸೇವೆ ನಡೆಯಿತು. ಸಂಜೆ ಡಾ.ಮೈಸೂರು ನಾಗಮಣಿ ಶ್ರೀನಾಥ್ ಅವರಿಂದ ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು.

ಕೆ.ಆರ್.ಬಡಾವಣೆ ಶ್ರೀರಾಮ ದೇವಾಲಯದಲ್ಲಿ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿ.ಶೀಲಾನಾಯ್ಡು ಮತ್ತು ಸಂಗಡಿಗರಿಂದ ಕಥಾ ಕಾಲಕ್ಷೇಪ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.