ADVERTISEMENT

ವಿಶ್ವಕರ್ಮ ವಿಶ್ವವಿದ್ಯಾನಿಲಯ ರೂಪಿಸಿ: ಕಂಬಾರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 7:55 IST
Last Updated 1 ಅಕ್ಟೋಬರ್ 2012, 7:55 IST

ತುಮಕೂರು: ವಿಶ್ವಕರ್ಮ ಸಮಾಜ ಪಾರಂಪರಿಕಕಾಯಕವಾಗಿ ಬೆಳೆಸಿಕೊಂಡು ಬಂದಿರುವ ಪಂಚಕರ್ಮಗಳನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ದೃಷ್ಟಿಯಿಂದ ವಿಶ್ವವಿದ್ಯಾನಿಲಯದ ಸ್ವರೂಪ ನೀಡಿ ಕಲಿಸಬೇಕು ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.

ವಿಶ್ವಕರ್ಮ ಯಜ್ಞಮಹೋತ್ಸವ ಸಮಿತಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಿದ್ದಗಂಗಾ ಮಠಾಧ್ಯಕ್ಷ ಡಾ.ಶಿವಕುಮಾರ ಸ್ವಾಮೀಜಿ ಅವರ 105ನೇ ವರ್ಷದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಂಬಾರರು, ಇಂದಿನ ಜಾಗತೀಕರಣದ ದಿನಗಳಲ್ಲಿ ನಮ್ಮ ಸಂಸ್ಕೃತಿ, ಕಸುಬು ನಾಶವಾಗಬಾರದು.
 
ಈ ನಿಟ್ಟಿನಲ್ಲಿ ವಿಶ್ವಕರ್ಮ ಕಾಲೇಜು ಸ್ಥಾಪಿಸಬೇಕಿದೆ. ತುಮಕೂರು ಸಮೀಪದ ದೀಪಾಂಬುದಿ ಕೆರೆಯಲ್ಲಿ ಪಂಚಕರ್ಮ ಕಸುಬು ತರಬೇತಿ ಶಾಲೆ ತೆರೆಯುವ ಆಸೆ ಇದೆ ಎಂದರು.

ವಿಶ್ವಕರ್ಮರು ಕರಕುಶಲ ಕಲೆ ನಿಪುಣರು. ವೇದ ಕಾಲದಿಂದ ಬೆಳೆದು ಬಂದಿರುವ ಇಂತಹ ಪಂಚ ಕಲೆಗಳನ್ನು ಯಾರಾದರೂ ಆಸಕ್ತರು ಕಲಿಯುವಂತೆ ತರಬೇತಿ ನೀಡಬೇಕಾದ ಅಗತ್ಯವಿದೆ. ವಿಶ್ವಕರ್ಮರಿಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಸಿದ್ದಗಂಗಾ ಡಾ.ಶಿವಕುಮಾರ ಸ್ವಾಮೀಜಿ ಗುರುವಂದನೆ ಸ್ವೀಕರಿಸಿ ಮಾತನಾಡಿ, ವಿಶ್ವಕರ್ಮರು ತಮ್ಮ ಪರಂಪರೆಯನ್ನು ರಕ್ಷಿಸಬೇಕು. ಕಾಯಕ ಮತ್ತು ಸೇವೆಯಲ್ಲಿ ನಿಷ್ಠ ಮತ್ತು ಪ್ರಾಮಾಣಿಕರಾಗಿರಬೇಕು. ಮಾನವೀಯತೆಯೊಂದಿಗೆ ಕಾಯಕವನ್ನು ಮಾಡಬೇಕು ಎಂದು ಕರೆ ನೀಡಿದರು.

ನಂದಿಗ್ರಾಮ ಶಿವಾತ್ಮಾನಂದ ಸರಸ್ವತಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಗೌರವಾಧ್ಯಕ್ಷ ಟಿ.ಎಚ್.ಆನಂದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ನಗರಸಭೆ ಸದಸ್ಯೆ ದೇವಿಕಾ, ಅಂಚೆ ಅಧೀಕ್ಷಕ ಎಚ್.ಆರ್.ಚಂದ್ರಶೇಖರಾಚಾರ್, ಸಮಿತಿ ಮುಖಂಡರಾದ ವೇದಮೂರ್ತಿ, ರುದ್ರಾಚಾರ್ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.