ADVERTISEMENT

ಸಮ್ಮಿಶ್ರ ಸರ್ಕಾರ ಪ್ರಗತಿಗೆ ಸಹಕಾರಿ: ಪ್ರೊ.ಎರಿಕ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2013, 9:04 IST
Last Updated 10 ಜನವರಿ 2013, 9:04 IST
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಎರಿಕ್ ಎಸ್.ಮ್ಯಾಸ್ಕಿನ್ ಅವರಿಗೆ ವಿಶಿಷ್ಟ ಗೌರವ ಪ್ರಾಧ್ಯಾಪಕ ಪದವಿ ನೀಡಿ ಸನ್ಮಾನಿಸಲಾಯಿತು. ಕುಲಪತಿ ಡಾ.ಎಸ್.ಸಿ.ಶರ್ಮಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಉದ್ಯಮಿ ಡಾ.ಪಿ.ಸದಾನಂದಮಯ್ಯ, ಮದ್ರಾಸ್ ಸಂಗೀತ ಅಕಾಡೆಮಿ ಕಾರ್ಯದರ್ಶಿ ಡಾ.ಪಪ್ಪು ವೇಣುಗೋಪಾಲರಾವ್, ಅಸೆಂಟ್ ಸಂಸ್ಥೆ ಗೌರವ ನಿರ್ದೇಶಕಿ ಡಾ.ಮಧುರಾ ಎಂ.ಛತ್ರಪತಿ, ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ ಭಾಗವಹಿಸಿದ್ದರು.
ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಎರಿಕ್ ಎಸ್.ಮ್ಯಾಸ್ಕಿನ್ ಅವರಿಗೆ ವಿಶಿಷ್ಟ ಗೌರವ ಪ್ರಾಧ್ಯಾಪಕ ಪದವಿ ನೀಡಿ ಸನ್ಮಾನಿಸಲಾಯಿತು. ಕುಲಪತಿ ಡಾ.ಎಸ್.ಸಿ.ಶರ್ಮಾ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಉದ್ಯಮಿ ಡಾ.ಪಿ.ಸದಾನಂದಮಯ್ಯ, ಮದ್ರಾಸ್ ಸಂಗೀತ ಅಕಾಡೆಮಿ ಕಾರ್ಯದರ್ಶಿ ಡಾ.ಪಪ್ಪು ವೇಣುಗೋಪಾಲರಾವ್, ಅಸೆಂಟ್ ಸಂಸ್ಥೆ ಗೌರವ ನಿರ್ದೇಶಕಿ ಡಾ.ಮಧುರಾ ಎಂ.ಛತ್ರಪತಿ, ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ ಭಾಗವಹಿಸಿದ್ದರು.   

ತುಮಕೂರು: ಸಮ್ಮಿಶ್ರ ಸರ್ಕಾರದಿಂದ ಆರ್ಥಿಕ ಅಭಿವೃದ್ಧಿಗೆ ಸಮಸ್ಯೆ ಆಗುವುದಿಲ್ಲ ಎಂದು ಯುಎಸ್‌ಎ ಆಡಮ್ಸ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಮತ್ತು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಪ್ರೊ.ಎರಿಕ್ ಎಸ್.ಮ್ಯಾಸ್ಕಿನ್ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾನಿಲಯದಲ್ಲಿ ಬುಧವಾರ ನಡೆದ ಡಾ.ಪಿ.ಸದಾನಂದಮಯ್ಯ ಕಟ್ಟಡದ 2ನೇ ಅಂತಸ್ತು ಉದ್ಘಾಟನೆ, ಮಯ್ಯ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ವಿಶಿಷ್ಟ ಗೌರವ ಪ್ರಾಧ್ಯಾಪಕ ಪದವಿ ಸ್ವೀಕರಿಸಿ ಅವರು ಮಾತನಾಡಿದರು.

ವಿಶ್ವದ ಹಲವು ದೇಶಗಳಲ್ಲಿ ಸಮ್ಮಿಶ್ರ ಸರ್ಕಾರ ಪದ್ಧತಿ ಇದೆ. ಇದರಿಂದ ದೇಶದ ಅಭಿವೃದ್ಧಿಗೆ ಸಮಸ್ಯೆ ಎನ್ನುವುದು ಸರಿಯಲ್ಲ ಎಂದು ಉಪನ್ಯಾಸಕರೊಬ್ಬರ ಪ್ರಶ್ನಗೆ ಉತ್ತರಿಸಿದರು.

ಅಮೆರಿಕದಂತೆ ಆದ್ಯತೆ ಮತದಾನ ಪದ್ಧತಿ ಜಾರಿಯಾದರೆ ಸಮ್ಮಿಶ್ರ ಸರ್ಕಾರ ಬರುವುದನ್ನು ಭಾರತದಲ್ಲಿಯೂ ತಪ್ಪಿಸಬಹುದು. ಭಾರತದ ಪ್ರಜಾಪ್ರಭುತ್ವ ಮಾದರಿಯಲ್ಲಿ ಸಮ್ಮಿಶ್ರ ಸರ್ಕಾರ ಅನಿವಾರ್ಯ. ಇದರಿಂದ ಉತ್ತಮ ಆಡಳಿತ ನೀಡಲು ಅನುಕೂಲ ಸಹ ಆಗಬಹುದು. ದೇಶದ ಹೆಚ್ಚು ಪಕ್ಷಗಳ ಅನುಭವ ಮತ್ತು ಸಲಹೆ ಪಡೆದು ಆಡಳಿತ ನಡೆಸಬಹುದು. ಇದರಿಂದ ಹೆಚ್ಚು ಜನರಿಗೆ ಹತ್ತಿರವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮದ್ರಾಸ್ ಸಂಗೀತ ಅಕಾಡೆಮಿ ಕಾರ್ಯದರ್ಶಿ ಡಾ.ಪಪ್ಪು ವೇಣುಗೋಪಾಲರಾವ್ ಗೌರವ ಪ್ರಾಧ್ಯಾಪಕ ಪದವಿ ಸ್ವೀಕರಿಸಿ ಮಾತನಾಡಿ, ಮನುಷ್ಯನ ಜೀವನದಲ್ಲಿ ಆರ್ಥಿಕ ಮತ್ತು ಹಾರ್ದಿಕ ಸಂಬಂಧ ಮುಖ್ಯ. ಸಮಾಜದಲ್ಲಿ ವ್ಯಕ್ತಿತ್ವಕ್ಕೆ ಬಹಳ ಬೆಲೆ ಇದೆ. ಮನುಷ್ಯ ತನ್ನ ಜೀವನದ ಉದ್ದಕ್ಕೂ ಕಲಿಯುವುದು ಸಾಕಷ್ಟು ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಕುಲಪತಿ ಡಾ.ಎಸ್.ಸಿ.ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಶಿವಣ್ಣ, ಉದ್ಯಮಿ ಡಾ.ಪಿ.ಸದಾನಂದಮಯ್ಯ, ಅಸೆಂಟ್ ಸಂಸ್ಥೆ ಗೌರವ ನಿರ್ದೇಶಕಿ ಡಾ.ಮಧುರಾ ಎಂ.ಛತ್ರಪತಿ, ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ ಭಾಗವಹಿಸಿದ್ದರು.

ತಹಶೀಲ್ದಾರ್‌ಗೆ ದಂಡ
ತುಮಕೂರು: ತಾಲ್ಲೂಕಿನ ಹೊನ್ನುಡಿಕೆ ಗ್ರಾಮಕ್ಕೆ ಸಂಬಂಧಿಸಿದ ಎಂ.ಆರ್ ನಕಲನ್ನು ನಿಗದಿತ ಸಮಯಕ್ಕೆ ನೀಡದ ಕಾರಣ ತಹಶೀಲ್ದಾರ್ ಅಹೋಬಳಯ್ಯ ಅವರಿಗೆ ರಾಜ್ಯ ಮಾಹಿತಿ ಆಯೋಗವು ರೂ. 2 ಸಾವಿರ ದಂಡ ವಿಧಿಸಿದೆ.
ಈ ದಂಡದ ಹಣವನ್ನು ಸ್ವಂತ ಹಣದಿಂದ ಭರಿಸುವಂತೆಯೂ ತಿಳಿಸಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ 28ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.