ತುಮಕೂರು: ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಸೋಲು– ಗೆಲುವಿನ ಹೊಣೆಯನ್ನು ವೈಯಕ್ತಿಕವಾಗಿ ಹೊರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದರೂ ವೈಯಕ್ತಿಕ ಹೊಣೆಗಾರಿಕೆ ಇಲ್ಲ. ಸಾಮೂಹಿಕ ಹೊಣೆಗಾರಿಕೆಯಲ್ಲಿ ಚುನಾವಣೆ ಎದುರಿಸುತ್ತಿದ್ದೇವೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತಿರುವುದಾಗಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ತಮ್ಮ ಪುತ್ರ ಸಂತೋಷ್ ತುಮಕೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದು ಸತ್ಯ. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನವಿಲ್ಲ. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಕೆಲಸ ಮಾಡುತ್ತೇನೆ. ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಾಗುವುದು. ಜಿಲ್ಲೆಯ ಕೆಜಿಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದ ಪಕ್ಷದ ಬಲ ಹೆಚ್ಚಿದೆ ಎಂದರು.
ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ತುರುವೇಕೆರೆಯಲ್ಲಿ ಮಾ. 24ರಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ. ಈ ಸಂದರ್ಭ ಎಂ.ಡಿ.ಲಕ್ಷ್ಮೀನಾರಾಯಣ, ಮಸಾಲೆ ಜಯರಾಂ ಮುಂತಾದವರನ್ನು ಕಾರ್ಯಕರ್ತರ ಸಮ್ಮುಖದಲ್ಲೇ ಪಕ್ಷಕ್ಕೆ ಸ್ವಾಗತಿಸಲಾಗುವುದು. ಮಾ. 26ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಮಾತನಾಡಿ, ಪಕ್ಷಾತೀತವಾಗಿ ನಾನು ವಿಧಾನ ಪರಿಷತ್ ಸದಸ್ಯನಾಗಿದ್ದು, ಕಾಂಗ್ರೆಸ್ ಸೇರಿರುವುದರಿಂದ ರಾಜೀನಾಮೆ ನೀಡುವುದಿಲ್ಲ. ನನ್ನನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡಲು ಮುಂದಾಗಿದ್ದು ಬಿ.ಎಸ್.ಯಡಿಯೂರಪ್ಪ. ಮಾಡಿದ್ದು ರಾಜ್ಯಪಾಲರು. ಬಿಜೆಪಿಗೂ ನನಗೂ ಯಾವುದೇ ಸಂಬಂಧವಿಲ್ಲ. ಕೆಜೆಪಿಯ 2ನೇ ಹಂತದ ನಾಯಕರಿಗೆ ಬಿಜೆಪಿಯಲ್ಲಿ ಮನ್ನಣೆ ಸಿಗಲಿಲ್ಲ. ಹೀಗಾಗಿ ಕಾಂಗ್ರೆಸ್ಗೆ ಬರುವಂತಾಯಿತು ಎಂದು ಹೇಳಿದರು.
ಹಿಂದೆ ಯಡಿಯೂರಪ್ಪ ಅವರನ್ನು ಗುರುವಾಗಿ ಸ್ವೀಕರಿಸಿದ್ದೆ. ಅವರಿಂದ ಅಧಿಕಾರವೂ ಸಿಕ್ಕಿತ್ತು. ಮುಂದೆ ಸಿದ್ದರಾಮಯ್ಯ ಅವರನ್ನು ಗುರುವಾಗಿ ಪರಿಗಣಿಸುತ್ತೇನೆ. ನನಗೆ ಕಾಂಗ್ರೆಸ್ನಲ್ಲಿಯೂ ಸ್ಥಾನಮಾನ ದೊರೆಯುವ ನಿರೀಕ್ಷೆಯೂ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಷಫೀಅಹ್ಮದ್, ಶಾಸಕ ಡಾ.ರಫೀಕ್ಅಹ್ಮದ್, ಮುಖಂಡರಾದ ಮಸಾಲೆ ಜಯರಾಂ, ಎಚ್.ನಿಂಗಪ್ಪ, ದಿನಕರ್ ಮುಂತಾದವರು ಭಾಗವಹಿಸಿದ್ದರು.
ಕೆಜೆಪಿ– ಕಾಂಗ್ರೆಸ್ ವಿಲೀನಕ್ಕೆ ಸಿದ್ಧತ
ಕೆಜೆಪಿಯನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಲು ಸಿದ್ಧತೆ ನಡೆದಿತ್ತು. ಬಿ.ಎಸ್.ಯಡಿಯೂರಪ್ಪ ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ ಕಾರಣಾಂತರಗಳಿಂದ ಇದು ಈಡೇರಲಿಲ್ಲ. ಆನಂತರ ಬಿಜೆಪಿ ಜೊತೆ ವಿಲೀನ ಮಾಡಲಾಯಿತು ಎಂದು ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಬಹಿರಂಗ ಪಡಿಸಿದರು.
ಹೀಗಾಗಿ ಯಡಿಯೂರಪ್ಪ ಮಾರ್ಗದರ್ಶನದಲ್ಲಿಯೇ ನಾವು ಕಾಂಗ್ರೆಸ್ ಸೇರಿದಂತಾಗಿದೆ. ಬಿಜೆಪಿ ತ್ಯಜಿಸುವಾಗಲೇ ಯಡಿಯೂರಪ್ಪ ನನ್ನ ಮಾತು ಕೇಳಲಿಲ್ಲ. ಶೋಭಾ ಕರಂದ್ಲಾಜೆ ಮಾತು ಕೇಳಿ ಯಡಿಯೂರಪ್ಪ ಕೆಜೆಪಿ ಕಟ್ಟಿದರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.