ADVERTISEMENT

ಹಣ ದುರುಪಯೋಗ: ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 9:50 IST
Last Updated 14 ಸೆಪ್ಟೆಂಬರ್ 2011, 9:50 IST

ತುರುವೇಕೆರೆ: ತಾಲ್ಲೂಕಿನ ಬೀಚನಹಳ್ಳಿ ಯಲ್ಲಿ ಮಂಗಳವಾರ ನಡೆದ  ಹಾಲು ಉತ್ಪಾದಕರ  ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕಾರ್ಯ ಕಾರಿ ಮಂಡಳಿಯ ಕಾರ್ಯವೈಖರಿ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿದರು.

ಆಡಿಟ್ ವರದಿಯೇ ಇಲ್ಲದೆ ಮಹಾಸಭೆ ನಡೆಸಿದರುವುದಕ್ಕೆ ಕಾಮಧೇನು ಡೇರಿ ಫಾರಂ ಉಪಕೇಂದ್ರದ ವ್ಯವಸ್ಥಾಪಕ ನಟರಾಜ್ ಕಾರ್ಯಕಾರಿ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು. ಸಂಘ ತಮಗೆ ರೂ. 85 ಸಾವಿರ ನಿರ್ವಹಣಾ ವೆಚ್ಚ ನೀಡದೆ ವಂಚನೆ ಮಾಡಿದೆ. ಸಂಘದ ಹಣವನ್ನು ವಿವೇಚನೆ ಇಲ್ಲದೆ ಬಳಸಲಾಗಿದೆ. ಕಾರ್ಯದರ್ಶಿ ನೀಡುತ್ತಿರುವ ಹಣಕಾಸಿನ ವಿವರಗಳು ವಾಸ್ತವ ಅಂಕಿ- ಅಂಶಗಳಲ್ಲ ಎಂದು ದಾಖಲೆಗಳನ್ನು  ಪ್ರದರ್ಶಿಸಿದ ಅವರು, ಸಂಘದ ವ್ಯವಹಾರಗಳ ಸಮಗ್ರ ತನಿಖೆ ಆಗಬೇಕೆಂದು  ಒತ್ತಾಯಿಸಿದರು.

ಇದಕ್ಕೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಧ್ವನಿ ಸೇರಿಸಿದರು. ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಸಂಘವನ್ನು ನಷ್ಟಕ್ಕೆ ದೂಡಿದ್ದಾರೆ. ಸರ್ಕಾರದ ಅನುದಾನದಲ್ಲಿ ರೂ. 20 ಕಡಿತ ಮಾಡುತ್ತಾರೆ. ಲೆಕ್ಕಪತ್ರಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಡೈರಿ ಕೇಂದ್ರದಲ್ಲಿ ಹಾಲಿನ ಕೊಬ್ಬಿನ ಗುಣಮಟ್ಟ ಅಳೆಯುವ ಮಾಪನ, ಸೈರನ್, ವೇಳಾಪಟ್ಟಿ, ಗಡಿಯಾರ ಯಾವುದೂ ಇಲ್ಲ.

ಮಾಪನಕ್ಕಾಗಿ ಒತ್ತಾಯಿಸಿದವರ ಹಾಲನ್ನು ತಿರಸ್ಕರಿಸಿ ವಾಪಸ್ ಕಳಿಸಲಾಗುತ್ತಿದೆ. 1993ರಿಂದ ಒಂದು ಪೈಸೆ ಬೋನಸ್ ನೀಡಿಲ್ಲ. ಅಲ್ಲದೆ ಪರಿಶಿಷ್ಟ ಜಾತಿ- ವರ್ಗದವರೆಂಬ ಕಾರಣಕ್ಕೆ ಅವರ ಹಾಲನ್ನು ಡೈರಿ ಹಿಂದೆ ಕಳಿಸುತ್ತಿದೆ ಎಂದು ನಿರ್ದೇಶಕ ಚಿಕ್ಕತಿಮ್ಮಯ್ಯ, ವಿಜಯಣ್ಣ, ಮಾದಯ್ಯ ಆರೋಪಿಸಿದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ವಿ.ಬಿ.ಅಪ್ಪಾಜಿಗೌಡ ಮಾತನಾಡಿ, ಸದಸ್ಯರು ಹಾಗೂ ನಿರ್ದೇಶಕರ ದೂರನ್ನು ಪರಿಗಣಿಸಿ ಸಹಕಾರಿ ಸಹಾಯಕ ನಿಬಂಧಕರಿಂದ 64ನೇ ಕಲಮಿನ ಅನ್ವಯ ವಿಚಾರಣೆ ನಡೆಸಲು ಕೋರಲಾಗುವುದು. ಸದಸ್ಯರು ರಾಜಕೀಯ ದುರುದ್ದೇಶಕ್ಕೆ ಸಂಘವನ್ನು ಹಾಳುಗೆಡವಬಾರದು ಎಂದರು.

ಬಿ.ಎಚ್. ನಂಜೇಗೌಡ, ಬಿ.ಟಿ. ನಟರಾಜ್, ದಿವಾಕರ್, ಬಸವರಾಜು, ರಾಮಣ್ಣ ಇತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.